ತಿರುವನಂತಪುರ (ಐಎಎನ್ಎಸ್): ದೇವಸ್ಥಾನದಲ್ಲಿರುವ ಚಿನ್ನದ ಪ್ರಮಾಣದ ಬಗ್ಗೆ ಸಂಪೂರ್ಣವಾದ ವಿವರಗಳನ್ನು ಸಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಕೇರಳದ ಎಲ್ಲ ದೇವಸ್ಥಾನ ಆಡಳಿತ ಮಂಡಳಿಗಳಿಗೆ ಪತ್ರ ಬರೆದಿದೆ.
ಆರ್ಬಿಐ ಪತ್ರ ಬರೆದಿರುವುದನ್ನು ದೃಢಪಡಿಸಿರುವ ಗುರುವಾಯೂರು ದೇವಸ್ಥಾನ ಮಂಡಳಿ ಸದಸ್ಯರು, ವ್ಯವಸ್ಥಾಪಕ ಸಮಿತಿಗೆ ಈ ಪತ್ರವನ್ನು ಕಳಿಸಿರುವುದಾಗಿ ಹೇಳಿದ್ದಾರೆ.
ಕೇರಳದ ಬಹುತೇಕ ಪ್ರಮುಖ ದೇವಸ್ಥಾನಗಳು ಐದು ವಿಭಿನ್ನ ದೇವಸ್ಥಾನ ಮಂಡಳಿ ವ್ಯಾಪ್ತಿಗೆ ಒಳಪಡುತ್ತವೆ. ಆ ಪೈಕಿ ತಿರುವಾಂಕೂರು ದೇವಸ್ಥಾನ ಮಂಡಳಿ ಅತಿ ದೊಡ್ಡ ದೇವಸ್ಥಾನ ಮಂಡಳಿ ಎಂಬ ಖ್ಯಾತಿ ಇದೆ. ಪ್ರಸಿದ್ಧ ಶಬರಿಮಲೈ ದೇವಸ್ಥಾನ ಕೂಡಾ ಇದೇ ದೇವಸ್ಥಾನ ಮಂಡಳಿ ವ್ಯಾಪ್ತಿಗೆ ಒಳಪಡುತ್ತದೆ.
`ಆರ್ಬಿಐಗೆ ಚಿನ್ನ ಖರೀದಿಸುವ ಯೋಚನೆ ಇಲ್ಲ. ಇದೊಂದು ಸಹಜ ಪ್ರಕ್ರಿಯೆ ಮಾತ್ರ' ಎಂದು ಆರ್ಬಿಐ ಪ್ರಾದೇಶಿಕ ನಿರ್ದೇಶಕ ಗಂಗಾಧರನ್ ತಿಳಿಸಿದ್ದಾರೆ.