ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹುಡುಗನಿಗೆ ಚೆಂದದ ಸ್ವಾಗತ

Last Updated 1 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

 ನರಗುಂದ: ಥಾಯ್ಲೆಂಡಿನ ಪಟ್ಟಾಯದಲ್ಲಿ ಈಚೆಗೆ ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ  ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ  ತಾಲ್ಲೂಕಿನ ಶಿರೋಳದ ಬಸವರಾಜ ತಿಪ್ಪಣ್ಣ ಕೊಣ್ಣೂರು ಅವರನ್ನು ಸ್ವಗ್ರಾಮದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. 

 ಬಡತನವಿದ್ದರೂ  ಅದನ್ನು ಲೆಕ್ಕಿಸದೆ ಯೋಗದಲ್ಲಿ ಮುಂದುವರೆದು ಕೊನೆಗೂ ಸಾಧನೆ ತೋರಿದ  ಯೋಗ ಪ್ರತಿಭೆ.  ಸತತ ಮೂರನೇ ಬಾರಿ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಸವರಾಜನಿಗೆ ಚಿನ್ನದ ಭಾಗ್ಯ ಒಲಿದಿದ್ದು ಈಗ. ಬಂಗಾರದ ಪದಕದೊಂದಿಗೆ ಬಂದಾಗ  ಬಸವರಾಜನಿಗೆ ಅದ್ದೂರಿ  ಸ್ವಾಗತ  ಕೋರಿದ ಮಹಿಳೆಯರು ತಿಲಕವನ್ನಿಟ್ಟು ಆರತಿ ಬೆಳಗಿದರು. 

 ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿ ಅವನಿಗಾಗಿ  ಸಮಾರಂಭ ಏರ್ಪಡಿಸಿ ಅವನನ್ನು ಸನ್ಮಾನಿಸಿದರು. ನೋಡುಗರಿಗೆ ರೋಮಾಂಚನವನ್ನುಂಟು ಮಾಡಿತು. ಎಲ್ಲರೂ ಆತನ ಕೈ ಕುಲುಕುವ ಮೂಲಕ ಹೂಮಾಲೆಗಳನ್ನು ಹಾಕಿದ್ದು ನಿಜಕ್ಕೂ ಗ್ರಾಮಸ್ಥರು ಆತನ ಮೇಲಿಟ್ಟ ಪ್ರೀತಿಗೆ  ಸಾಕ್ಷಿಯಾಗಿತ್ತು. 

 ಅಪ್ಪಟ ಗ್ರಾಮೀಣ  ಪ್ರತಿಭೆ ಬಸವರಾಜ ಕೃಷಿ ಕುಟುಂಬದಲ್ಲಿ  ಜನಿಸಿ ಯೋಗವನ್ನೇ ತನ್ನ ಉಸಿರು ಮಾಡಿಕೊಂಡು ವಿದೇಶದಲ್ಲಿ ಕೀರ್ತಿ ಹರಡಿ ಬಂದಿದ್ದಾರೆ.  ಶಿರೋಳದ ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ, ವ್ಯಾಯಾಮ ಹಾಗೂ ಕ್ರೀಡಾ ಸಂಘದ  ಅಧ್ಯಕ್ಷರಾದ ಪ್ರಕಾಶಗೌಡ ತಿರಕನಗೌಡ್ರ ಬಸವರಾಜನಿಗೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.

ಪ್ರೀತಿಯ ಮಳೆಯಲ್ಲಿ ನೆಂದಿದ್ದ ಬಸವರಾಜ ಭಾವುಕನಾಗಿಯೇ ಮಾತನಾಡಿದ. “ಗ್ರಾಮಸ್ಥರ ಅಭಿಮಾನಕ್ಕೆ ನಾನು ಚಿರಋಣಿ” ಎಂದನು.ವಿದೇಶಕ್ಕೆ  ಹೋಗಲು ಸಹಾಯ ಮಾಡಿದವರಿಗೆ ಅಭಿನಂದನೆ ತಿಳಿಸಿದ. ಹಿರಿಯರಾದ  ವಿ.ಬಿ.ಕೋಡಬಳಿ, ಎಮ್.ಕೆ.ದಿಬ್ಬದ, ಡಿ.ವೈ.ಕಾಡಪ್ಪನವರ, ಬಿ.ವಿ. ಕುಪ್ಪಸ್ತ, ವಿ.ಎಸ್.ಚವಡಿ, ಗುರುದೇವಿ ಶಾನವಾಡಮಠ, ಪ್ರಭಯ್ಯ ಅಂಕಲಿಮಠ, ಶಿರೋಳದ ಸ್ತ್ರೀಶಕ್ತಿ ಸಂಘದ ಸದಸ್ಯರು, ಶಾಲಾ, ಕಾಲೇಜುಗಳ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT