ಬೆಂಗಳೂರು: ಖಾಸಗಿ ಟ್ರಾವೆಲ್ಸ್ ಏಜೆನ್ಸಿಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನಾಭರಣ ವ್ಯಾಪಾರಿಯನ್ನು ದುಷ್ಕರ್ಮಿಗಳು ಎಳೆದೊಯ್ದು ಹಲ್ಲೆ ನಡೆಸಿ 21 ಕೆ.ಜಿ ಬೆಳ್ಳಿ ವಸ್ತುಗಳು ಮತ್ತು ಎರಡು ಲಕ್ಷ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ಶೇಷಾದ್ರಿ ರಸ್ತೆಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಗೋಪಿನಾಥ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಚಿನ್ನಾಭರಣ ವ್ಯಾಪಾರಿಯಾದ ಅವರು ಹೈದರಾಬಾದ್, ಬೆಂಗಳೂರು, ಚೆನ್ನೈನಲ್ಲಿ ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯವಹಾರದ ಉದ್ದೇಶಕ್ಕಾಗಿ ಹೈದರಾಬಾದ್ಗೆ ಹೋಗಿದ್ದ ಅವರು ಬೆಳ್ಳಿ ವಸ್ತುಗಳು ಹಾಗೂ ಹಣದೊಂದಿಗೆ ಖಾಸಗಿ ಟ್ರಾವೆಲ್ಸ್ ಏಜೆನ್ಸಿ ಬಸ್ನಲ್ಲಿ ಸೋಮವಾರ ನಸುಕಿನಲ್ಲಿ ಬೆಂಗಳೂರು ಮಾರ್ಗವಾಗಿ ತಮಿಳುನಾಡಿಗೆ ವಾಪಸ್ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅವರು ಪ್ರಯಾಣಿಸುತ್ತಿದ್ದ ಬಸ್ ಬೆಳಗಿನ ಜಾವ 5.30ರ ಸುಮಾರಿಗೆ ಶೇಷಾದ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಹಿಂಬಾಲಿಸಿ ಬಂದು ವಾಹನವನ್ನು ಅಡ್ಡಗಟ್ಟಿದರು. ತಾವು ಭ್ರಷ್ಟಾಚಾರ ನಿರ್ಮೂಲನಾ ಪಡೆಯ ಅಧಿಕಾರಿಗಳೆಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ಬಸ್ನ ಒಳ ನುಗ್ಗಿದ ಅವರು, ವಾಹನದ ಕೊನೆಯ ಸೀಟಿನಲ್ಲಿ ಕುಳಿತಿದ್ದ ಗೋಪಿನಾಥ್ ಅವರನ್ನು ಬಸ್ನಿಂದ ಕೆಳಗಿಳಿಸಿದರು. ನಂತರ ಅವರನ್ನು ಕಾರಿನಲ್ಲಿ ಎಳೆದೊಯ್ದು ಹಲ್ಲೆ ನಡೆಸಿ ಬೆಳ್ಳಿ ವಸ್ತುಗಳು ಮತ್ತು ಹಣವನ್ನು ಕಿತ್ತುಕೊಂಡು ಸಿಟಿ ಮಾರುಕಟ್ಟೆ ಮೇಲು ಸೇತುವೆ ಬಳಿ ವಾಹನದಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.