ಚಿಲಿ ದೇಶದ ಗಣಿಯೊಂದರಲ್ಲಿ ಅರವತ್ತೊಂಬತ್ತು ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ ಮೂವತ್ತಮೂರು ಕಾರ್ಮಿಕರನ್ನು ರಕ್ಷಿಸಿದ ರೋಚಕ ಘಟನೆ ವಿಶ್ವದ ಗಮನಸೆಳೆದಿತ್ತು. ಈ ಘಟನೆಯ ಕಾವು ಆರುವ ಮೊದಲೇ ಸರೋಜಾ ಪ್ರಕಾಶ ಅವರ ‘ಚಿಲಿಯ ಕಲಿಗಳು’ ಪುಸ್ತಕ ಹೊರಬಂದಿದೆ. ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುವಲ್ಲಿ ಇಂಗ್ಲಿಷ್ನ ಮುಂದೆ ದೇಸಿ ಭಾಷೆಗಳು ಯಾವಾಗಲೂ ಎರಡನೆಯವೇ ಆಗಿರುತ್ತವೆ. ಆದರೆ, ಚಿಲಿ ಗಣಿ ಘಟನೆಯ ಬಗ್ಗೆ ಇಂಗ್ಲಿಷ್ನಲ್ಲಿ ಪುಸ್ತಕವೊಂದು ಪ್ರಕಟವಾಗುವ ಮೊದಲೇ ಕನ್ನಡದಲ್ಲಿ ‘ಚಿಲಿಯ ಕಲಿಗಳು’ ಪ್ರಕಟವಾಗಿದೆ. ಈ ಮಟ್ಟಿಗಿದು ವಿಶೇಷ ಪುಸ್ತಕ.
ಪುಸ್ತಕದ ವಸ್ತುವಿಗೆ ಒಂದುರೀತಿಯ ಭಾವುಕ ಹಾಗೂ ಕೌತುಕ ಗುಣವಿದ್ದು, ಅದು ಪುಸ್ತಕದ ನಿರೂಪಣೆಯಲ್ಲೂ ಲವಲವಿಕೆಯಿಂದ ಕಾಣಿಸಿಕೊಂಡಿದೆ. ಇಪ್ಪತ್ತೆರಡು ಅಧ್ಯಾಯಗಳಲ್ಲಿ ಇಡೀ ಘಟನೆಯನ್ನು ಲೇಖಕಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಗಣಿಗಾರಿಕೆ ಎಂದರೆ ಜನಸಾಮಾನ್ಯರು ಮೂಗು ಮುರಿಯುವ ಪರಿಸ್ಥಿತಿ ಇರುವ ಸಂದರ್ಭದಲ್ಲಿ, ಗಣಿಯ ಆಳದಿಂದ ಭಾವುಕ ಮಾನವೀಯ ಜಗತ್ತೊಂದನ್ನು ಸರೋಜಾ ಪ್ರಕಾಶ್ ಕಟ್ಟಿಕೊಟ್ಟಿದಾರೆ.