ಬೆಂಗಳೂರು (ಪಿಟಿಐ/ಐಎಎನ್ಎಸ್): ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಚೀನದೊಂದಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಹಲವು ಹಂತಗಳ ಸಮಾಲೋಚನೆಗಳು ನಡೆಯುತ್ತಿವೆ ಎಂದು ಬುಧವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಹಾಜರಿದ್ದ ಅವರನ್ನು ಚೀನಾದ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಮಾತುಕತೆ ಜಾರಿಯಲ್ಲಿದೆ ಎಂದ ತಿಳಿಸುತ್ತಾ ಭಾರತದ ಸಾರ್ವಭೌಮತ್ವ ಹಾಗೂ ಭದ್ರತೆಯನ್ನು ರಕ್ಷಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದಷ್ಟೆ ಹೇಳಿದರು.
ಮತ್ತೆ ಈ ಬಗ್ಗೆ ಮತ್ತೇನೂ ಮಾತನಾಡಲು ಅವರು ನಿರಾಕರಿಸಿದರು.
ಇತ್ತೀಚೆಗೆ ಚೀನಾದ ಪಡೆಗಳು ಲಡಾಕ್ನ ದೌಲತ್ ಬೇಗ್ ಒಲ್ಡಿ (ಡಿಬಿಒ) ಪ್ರದೇಶದಲ್ಲಿ 10 ಕಿ.ಮೀ. ದಾಟಿ ಭಾರತಕ್ಕೆ ಬಂದಿದ್ದು, ಮಂಗಳವಾರವಷ್ಟೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಭಾರತ ಆಗ್ರಹಿಸಿದ್ದರೆ, ಚೀನಾ ತಾನು ಅತಿಕ್ರಮಿಸಿಲ್ಲ ಎಂದು ತಿಳಿಸಿತ್ತು.
ಈ ಸಂಬಂಧ ಮಂಗಳವಾರ ಉಭಯ ಸೇನಾಧಿಕಾರಿಗಳ ನಡುವೆ ನಡೆದ 2ನೇ ಶಾಂತಿ ಸಭೆಯೂ (ಧ್ವಜಸಭೆ) ವಿಫಲಗೊಂಡಿತು. ಮೂರು ಗಂಟೆಗಳೆ ಕಾಲ ಸಭೆ ನಡೆದರೂ ಚೀನಾ ಸೈನಿಕರು ಹಿಂದೆ ಸರಿಯಲು ಸ್ಪಷ್ಟವಾಗಿ ನಿರಾಕರಿಸಿದರು.
ಈ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಎನ್.ಎನ್ ವೋರಾ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದಲ್ಲಾ ಅವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವಿವರಿಸಿದರು.