ಬ್ರಹ್ಮಾವರ: ಚೀನಾದಲ್ಲಿ ಕ್ರೀಡೆಗೆ ಮೂಲ ಸೌಲಭ್ಯ ಇಲ್ಲದ ಶಾಲೆಗೆ ಅನುಮತಿ ದೊರಕುವುದಿಲ್ಲ. ಹಾಗಾಗಿ ಚೀನಾ ಇಂದು ಒಲಿಂಪಿಕ್ಸ್ನಲ್ಲಿ ಅತೀ ಹೆಚ್ಚು ಪದಕಗಳನ್ನು ಗಳಿಸುತ್ತಿದೆ. ಈ ವ್ಯವಸ್ಥೆ ಭಾರತದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಹಾರಾಡಿಯ ಜಿ.ಎಂ.ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ 8ನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಪ್ರಾಮುಖ್ಯತೆ ಕೊಡದೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆ ನಿಟ್ಟಿನಲ್ಲಿ ಜಿ.ಎಂ.ವಿದ್ಯಾನಿಕೇತನ್ ಗಾಮೀಣ ಮಟ್ಟದಲ್ಲೂ ಕೂಡ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಟ್ಟಿರುವುದು ಪ್ರಶಂಸನಾರ್ಹ ಎಂದರು.
ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲ ಎನ್.ಎಸ್.ಅಡಿಗ, ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಜಾರ್ಜ್ ಕುರಿಯನ್, ಉಪಪ್ರಾಂಶುಪಾಲೆ ಜೆಸ್ಮಾ, ದೈಹಿಕ ಶಿಕ್ಷಕ ತ್ಯಾಗೇಶ್ಚಂದ್ರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಕಿರಿಯರ ವಿಭಾಗದ ಪ್ರಶಸ್ತಿಯನ್ನು ಸುಶಾಂತ್. ದೇವಿಕಾ, ಸುಶ್ಮಿತಾ, ಹಿರಿಯ ವಿಭಾಗದಲ್ಲಿ ವರ್ಣನ್, ಅರ್ಜುನ್, ಅಜಿತ್ ಪಿ.ಎಸ್ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಅರ್ಜುನ್, ಸುಶ್ಮಿತಾ ಪೂಜಾರಿ ವೈಯುಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರು. ಸಮಗ್ರ ತಂಡ ಪ್ರಶಸ್ತಿಯನ್ನು ಪ್ರಜ್ಞಾ ಹೌಸ್ ಗಿಟ್ಟಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಹೆಗ್ಡೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.