ಬೀಜಿಂಗ್ (ಪಿಟಿಐ): ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಚೀನಾದ 15 ವರ್ತಕರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಇಬ್ಬರು ಭಾರತೀಯ ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ಚೀನಾ ಪ್ರವಾಸದಲ್ಲಿದ್ದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ನಂತರ ದೀಪಕ್ ರಹೇಜ, ಶ್ಯಾಮ್ ಸುಂದರ್ ಅಗರ್ವಾಲ್ ಗುರುವಾರ ಈ ವಿಷಯ ತಿಳಿಸಿದರು.
ಇವರು ಹಿಂದೆ ಯಿವುವಿನ ಯೂರೊ ಗ್ಲೋಬಲ್ ಟ್ರೇಡಿಂಗ್ ಕಂಪೆನಿಯಲ್ಲಿ ಕೆಲಸಕ್ಕಿದ್ದರು. ಕಂಪೆನಿಯ ಮಾಲೀಕ ಮಹೀರ್ ಹುಸೇನ್ ಬರಾಜ ಹಣದೊಂದಿಗೆ ಪರಾರಿಯಾಗಿದ್ದ ಎನ್ನಲಾಗಿದ್ದು, ಆಗ ಸ್ಥಳೀಯ ವರ್ತಕರು ಇವರನ್ನು ಕೂಡಿ ಹಾಕಿ ಹಿಂಸೆ ನೀಡಿದ್ದರು. ಭಾರತೀಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಇಬ್ಬರನ್ನೂ ಬಿಡಿಸಿಕೊಂಡು ಬಂದು ಶಾಂಘೈಗೆ ಕರೆತರಲಾಗಿತ್ತು. ಆ ನಂತರ ಇದೇ ಮೊದಲ ಬಾರಿಗೆ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ.