ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು

Last Updated 5 ಸೆಪ್ಟೆಂಬರ್ 2013, 20:17 IST
ಅಕ್ಷರ ಗಾತ್ರ

ಅ.31ರಿಂದ ವಿಂಡೀಸ್‌ ಎದುರು ಸರಣಿ
ನವದೆಹಲಿ (ಪಿಟಿಐ): ಭಾರತ  ಹಾಗೂ ವೆಸ್ಟ್‌ಇಂಡೀಸ್‌ ನಡುವಿನ ಕ್ರಿಕೆಟ್‌ ಸರಣಿ ಅಕ್ಟೋಬರ್‌ 31ರಂದು ಆರಂಭವಾಗಲಿದೆ. ಸ್ವದೇಶದಲ್ಲಿ ನಡೆಯಲಿರುವ ಈ ಸರಣಿ ವೇಳೆ ಎರಡು ಟೆಸ್ಟ್‌ ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಸಚಿನ್‌ ತೆಂಡೂಲ್ಕರ್‌ ಅವರಿಗೆ ಸ್ವದೇಶದಲ್ಲಿ 200ನೇ ಟೆಸ್ಟ್‌ ಪಂದ್ಯ ಆಡಲು ಅನುವು ಮಾಡಿಕೊಡುವ ಉದ್ದೇಶದಿಂದ ಬಿಸಿಸಿಐ ತುರ್ತಾಗಿ ಈ ಯೋಜನೆಗೆ ಮುಂದಾಗಿತ್ತು. ಭಾರತದ ಪ್ರವಾಸದ ವೇಳೆ ವಿಂಡೀಸ್‌ ಮೂರು ದಿನಗಳ ಅಭ್ಯಾಸ ಪಂದ್ಯವನ್ನೂ ಆಡಲಿದೆ.

‘ಭಾರತ–ವಿಂಡೀಸ್‌ ಸರಣಿ ಅ.31ರಿಂದ ನವೆಂಬರ್‌ 27ರವರೆಗೆ ನಡೆಯಲಿದೆ. ಸ್ಥಳ ಹಾಗೂ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ತಿಳಿಸಿದ್ದಾರೆ.

ರಾಜ್ಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ 29ರಿಂದ
ಹುಬ್ಬಳ್ಳಿ:
ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಹಾಗೂ ವಿಜಾಪುರ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಆಶ್ರಯದಲ್ಲಿ ರಾಜ್ಯಮಟ್ಟದ ಏಳನೇ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಇದೇ ಸೆಪ್ಟೆಂಬರ್ 29 ಮತ್ತು 30ರಂದು ವಿಜಾಪುರದಲ್ಲಿ ನಡೆಯಲಿದೆ.

14,16 ಹಾಗೂ 18 ವರ್ಷದೊಳಗಿನ ಬಾಲಕ-ಬಾಲಕಿಯರು ಮತ್ತು ಪುರುಷ-ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನವೆಂಬರ್‌ನಲ್ಲಿ ಮಣಿಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡಗಳ ಆಯ್ಕೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.

ಭಾಗವಹಿಸುವವರು ಸೆಪ್ಟೆಂಬರ್ 28ರಂದು ಸಂಜೆ 4 ಗಂಟೆಗೆ ವಿಜಾಪುರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನನ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಮಾಹಿತಿಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ (9008377875) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕ್ರಿಕೆಟ್: ಪಾಕಿಸ್ತಾನ ಮರು ಹೋರಾಟ
ಹರಾರೆ: ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಜಿಂಬಾಬ್ವೆ ಎದುರಿನ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಮರು ಹೋರಾಟ ನಡೆಸಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 90.1 ಓವರ್‌ಗಳಲ್ಲಿ 249 ಮತ್ತು ಎರಡನೇ ಇನಿಂಗ್ಸ್‌ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 168 (ಯೂನಿಸ್‌ ಖಾನ್‌ ಬ್ಯಾಟಿಂಗ್‌ 76, ಮಿಸ್ಬಾ ಉಲ್‌ ಹಕ್‌ 52; ಶಿಂಗೆ ಮಸಕಜಾ 41ಕ್ಕೆ1); ಜಿಂಬಾಬ್ವೆ ಪ್ರಥಮ ಇನಿಂಗ್ಸ್‌ 103.3 ಓವರ್‌ಗಳಲ್ಲಿ 327. (ಎಲ್ಟನ್‌ ಚಿಗುಂಬರಾ 69; ಜುನೈದ್‌ ಖಾನ್‌ 71ಕ್ಕೆ2, ಸಯೀದ್‌ ಅಜ್ಮಲ್‌ 95ಕ್ಕೆ7).

ಜೆಎಎಸ್‌ಇ ಕಪ್‌: ಡಿಪಿಎಸ್‌ಗೆ ಪ್ರಶಸ್ತಿ
ಬೆಂಗಳೂರು:
ದೆಹಲಿ ಪಬ್ಲಿಕ್‌ ಸ್ಕೂಲ್‌ (ಡಿಪಿಎಸ್‌) ತಂಡದವರು ಇಲ್ಲಿ ನಡೆಯುತ್ತಿರುವ ಜೆಎಎಸ್‌ಇ ಕಪ್‌ ಅಂತರ ಶಾಲಾ ಕ್ರೀಡಾ ಉತ್ಸವದ ಫುಟ್‌ಬಾಲ್‌ ಟೂರ್ನಿಯಲ್ಲಿ 1–0ರಲ್ಲಿ ಆತಿಥೇಯ ಜೈನ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಶಿಯಲ್‌ ಸ್ಕೂಲ್‌ (ಜೆಐಆರ್‌ಎಸ್‌) ತಂಡವನ್ನು ಮಣಿಸಿ ಚಾಂಪಿಯನ್‌ ಆದರು.

ಆನಂದ್‌ ಪವಾರ್‌ಗೆ ಸೋಲು
ತೈಪೆ (ಐಎಎನ್‌ಎಸ್‌): ಭಾರತದ ಆನಂದ್‌ ಪವಾರ್‌ ಇಲ್ಲಿ ನಡೆಯುತ್ತಿರುವ ಚೀನಾ ತೈಪೆ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿ­ಯಲ್ಲಿ ಪರಾಭವಗೊಂಡಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ­ಗೊಂಡಿದೆ. ಅವರು 21–16, 12–21, 11–21ರಲ್ಲಿ ಶಾವೊ ವೆನ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT