ಶೃಂಗೇರಿ (ಕೊಪ್ಪ): ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯ ಚುಟುಕಾಗಿದ್ದರೂ ಅರ್ಥಪೂರ್ಣ ವಿಷಯವನ್ನು ಹೊಂದಿರುತ್ತದೆ ಎಂದು ಕವಿ ಡುಂಡಿರಾಜ್ ಹೇಳಿದರು.
ಮೆಣಸೆಯಲ್ಲಿ ನಡೆಯುತ್ತಿರುವ ತಾಲ್ಲೂಕು ಐದನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತ್ಯ ಲೋಕ ಗೋಷ್ಠಿಯಲ್ಲಿ ಚುಟುಕಿನಲ್ಲಿ ಹಾಸ್ಯ ಕುರಿತು ಅವರು ಭಾನುವಾರ ಮಾತನಾಡಿದರು.
ಚುಟುಕುಗಳಲ್ಲಿ ಹಾಸ್ಯ ಹಿಂದಿನಿಂದಲೂ ಇದ್ದು ಅದು ಪರಿಣಾಮಕಾರಿಯೂ ಆಗಿದೆ. ದಿನಪತ್ರಿಕೆ, ವಾರ, ಮಾಸಿಕ ಪತ್ರಿಕೆಗಳಲ್ಲಿ ಚುಟುಕಿಗೆ ಮೊದಲಿಂದಲೂ ಸ್ಥಾನ ಕಲ್ಪಿಸಲಾಗಿದ್ದು ಅದು ತನ್ನದೇ ಆದ ಓದುಗರನ್ನು ಹೊಂದಿದೆ.
ಹವ್ಯಾಸಕ್ಕಾಗಿ ರಚಿಸುವ ಚುಟುಕುಗಳು ಓದುಗರನ್ನು ಸಾಹಿತ್ಯದೆಡೆ ಆಕರ್ಷಿಸುತ್ತದೆ, ಸಾಹಿತ್ಯದ ಬೆಳವಣಿಗೆಯಲ್ಲಿ ಚುಟುಕು ಸಾಹಿತ್ಯವೂ ಮುಖ್ಯವಾಗಿದೆ ಎಂದ ಅವರು ಹಾಸ್ಯ ನಿರೂಪಿಸಿರುವ ಚುಟುಕುಗಳನ್ನು ವಾಚಿಸಿದರು. ಜೆಸಿಬಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಟಿ.ಎಸ್.ವೆಂಕಣ್ಣಯ್ಯ ಗೋಷ್ಠಿ ಉದ್ಘಾಟಿಸಿದರು.