ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣದಲ್ಲಿ...

Last Updated 22 ಏಪ್ರಿಲ್ 2013, 9:35 IST
ಅಕ್ಷರ ಗಾತ್ರ

ಬಂಡಾಯ ಅಭ್ಯರ್ಥಿಯಾಗಿ ಬಿ.ಆರ್. ನೀಲಕಂಠಪ್ಪ
ತರೀಕೆರೆ:  ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ  ಕಣದಲ್ಲಿ ರುವುದಾಗಿ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ತಿಳಿಸಿದರು.
ತರೀಕೆರೆಯಲ್ಲಿ  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು , ಕಾಂಗ್ರೆಸ್ ಮತ್ತು ಕೆಜೆಪಿ ಒಳ ಒಪ್ಪಂದದ ಫಲವಾಗಿ  ಕಾಂಗ್ರೆಸ್ ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅನುಭವ ಇಲ್ಲದ , ತಾಲ್ಲೂಕಿನ ಜನತೆಗೆ ಪರಿಚಿ ತರಲ್ಲದ ಯಾವುದೇ  ಹೋರಾಟ ನಡೆಸದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹಾಲಿ ಶಾಸಕರಿಗೆ ಅನುಕೂಲ ಮಾಡುವ ತಂತ್ರಗಾರಿಕೆ ರೂಪಿಸಿದೆ  ಎಂದು ಆರೋಪಿಸಿದರು.

ಜಾತ್ರೆ, ರಾಮೋತ್ಸವಕ್ಕೆ ನೀತಿಸಂಹಿತೆ ಬಿಸಿ
ಶೃಂಗೇರಿ:
ಸಭೆ, ಸಮಾರಂಭಗಳಿಗೆ ಚುನಾವಣಾ ಆಯೋಗ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದರಿಂದ ತಾಲ್ಲೂಕಿನಲ್ಲಿ ಒಂದೆಡೆ ಚುನಾವಣಾ ಪ್ರಚಾರ ಮಂದಗತಿಯಲ್ಲಿ ಸಾಗಿದ್ದರೆ, ಇನ್ನೊಂದೆಡೆ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ತೀವ್ರ ಅಡಚಣೆ ಉಂಟಾಗಿದೆ.

ಪಟ್ಟಣದ ಗೋಪಾಲಕೃಷ್ಣ ದೇವಸ್ಥಾನ, ಕೆರೆ ಆಂಜನೇಯ ಸ್ವಾಮಿ ದೇವಸ್ಥಾನ, ಚಪ್ಪರದ ಆಂಜನೇಯ ಸ್ವಾಮಿ ದೇವಸ್ಥಾನ, ನೆಮ್ಮೋರು ಅಗ್ರಹಾರ, ವಿದ್ಯಾರಣ್ಯಪುರ, ಹೊಳೆಕೊಪ್ಪದಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬರುತ್ತಿರುವ ರಾಮೋತ್ಸವ ಕಾರ್ಯಕ್ರಮ ಚುನಾವಣಾ ಆಯೋಗದ ಕ್ರಮದಿಂದ ಹಲವಾರು ತೊಡಕುಗಳನ್ನು ಎದುರಿಸುವಂತಾಗಿದೆ.

ಯುಗಾದಿ ದಿನದಿಂದ ಆರಂಭಗೊಳ್ಳುವ ರಾಮೋತ್ಸವದಲ್ಲಿ ರಾಮನವಮಿ, ಶ್ರಿ ರಾಮ ಪಟ್ಟಾಭಿಷೇಕ, ಹನುಮೋತ್ಸವ, ಸಾಮೂಹಿಕ ಸತ್ಯನಾರಾಯಣ ವ್ರತ, ಅನ್ನಸಂತರ್ಪಣೆ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗ ಅನುಮತಿ ನೀಡುವ ಸಂದರ್ಭದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ಕಾರ್ಯಕ್ರಮದ ಆಯೋಜಕರಲ್ಲಿ ಗೊಂದಲ ಉಂಟುಮಾಡಿದೆ.

ಇದೇ ಕಾರಣಕ್ಕಾಗಿ ನೆಮ್ಮೋರಿನಲ್ಲಿ ನಡೆಯಬೇಕಾಗಿದ್ದ ಉರುಸ್ ಕಾರ್ಯಕ್ರಮವನ್ನು ಸಹ ಮುಂದೂಡಲಾಗಿದೆ. ಕಿಗ್ಗದ ಮುಜರಾಯಿ ಇಲಾಖೆಯ ಋಷ್ಯಶೃಂಗ ದೇವಾಲದ ರಥೋತ್ಸವದಲ್ಲಿ ಸಹ ಅನ್ನಸಂತರ್ಪಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮದುವೆ, ಮುಂಜಿ ಮುಂತಾದ ಖಾಸಗಿ ಕಾರ್ಯಕ್ರಮಗಳಿಗೂ ನೀತಿ ಸಂಹಿತೆಯ ಅಡಚಣೆ ಉಂಟಾಗುತ್ತಿರುವುದರಿಂದ ಜನಸಾಮಾನ್ಯರಲ್ಲಿ ಚುನಾವಣೆ ಬಗ್ಗೆಯೆ ನಿರಾಸಕ್ತಿ ಉಂಟಾಗುವಂತಾಗಿದೆ. 

ಬಿಎಸ್‌ಆರ್ ಬಿ ಫಾರಂ ಮಾರಾಟ ಆರೋಪ
ಮೂಡಿಗೆರೆ:
ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷರು ಬಿ.ಫಾರಂ ಅನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಬಿಎಸ್‌ಆರ್ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದ ತಾಲ್ಲೂಕು ಅಧ್ಯಕ್ಷ ಹಾಂದಿ ಲಕ್ಷ್ಮಣ ಆರೋಪಿಸಿದ್ದಾರೆ.ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಚುನಾವಣೆಗೆ ಪಕ್ಷದಿಂದ ಕಣಕ್ಕಿಳಿಯಲು ಆಕಾಂಕ್ಷಿಯಾಗಿದ್ದ ನನಗೆ ಬಿ ಫಾರಂ ಕೊಡಿಸಲು ನನ್ನ ಬಳಿ ಹಣ ವಸೂಲಿ ಮಾಡಿ, ನಂತರದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಬೇರೊಬ್ಬ ಅಭ್ಯರ್ಥಿಗೆ ಬಿ. ಫಾರಂ ನೀಡಿ, ಉದ್ದೇಶಪೂರ್ವಕವಾಗಿ ನಾಮಪತ್ರ ತಿರಸ್ಕೃತವಾಗುವಂತೆ ತಂತ್ರ ಎಣೆದು ಪಕ್ಷಕ್ಕೆ ದ್ರೋಹವೆಸಗಿದ್ದಾರೆ' ಎಂದು ಆರೋಪಿಸಿದರು.  ಸುದ್ದಿಗೋಷ್ಠಿಯಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳಾದ ಮಹೇಶ್, ಆನಂದ, ಸುಂದರೇಶ್, ವೆಂಕಟೇಶ್, ಕಿರಣ, ಸುರೇಶ, ರಘು ಇದ್ದರು

ಬಣಕಲ್‌ಗೆ ಇಂದು ಮಾಜಿ ಸಿಎಂ ಆಗಮನ
ಮೂಡಿಗೆರೆ:
ವಿಧಾನಸಭಾ ಚುನಾವಣೆಯ ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ಮಾಜಿ ಸಿ.ಎಂ. ಸದಾನಂದಗೌಡ ಸೋಮವಾರ ಮಧ್ಯಾಹ್ನ 2.30 ಕ್ಕೆ ಬಣಕಲ್‌ಗೆ ಆಗಮಿಸಲಿದ್ದಾರೆ ಎಂದು ಪಕ್ಷದ ತಾಲ್ಲೂಕು ವಕ್ತಾರ ಟಿ. ಹರೀಶ್ ತಿಳಿಸಿದ್ದಾರೆ.

ಬಣಕಲ್‌ನಲ್ಲಿ ಪಕ್ಷ ಏರ್ಪಡಿಸಿರುವ ಬಹಿರಂಗ ಸಭೆಯಲ್ಲಿ ಮಾತನಾಡಿ, ನಂತರ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿ ಜಿಲ್ಲೆಗೆ ತೆರಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

`ಸಂವಿಧಾನ ಸಮರ್ಪಕ ಜಾರಿಯೇ ಬಿಎಸ್‌ಪಿ ಪ್ರಣಾಳಿಕೆ'
ಮೂಡಿಗೆರೆ:
ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಪ್ರಣಾಳಿಕೆ ಹೊರಡಿಸಿ, ವಿವಿಧ ಭರವಸೆ ನೀಡಿ, ಅಧಿಕಾರಿ ಹಿಡಿದ ಮೇಲೆ ಭರವಸೆಗಳನ್ನು ಈಡೇರಿಸದೇ ಮತದಾರರನ್ನು ವಂಚಿಸುತ್ತವೆ. ಆದರೆ ಬಿಎಸ್‌ಪಿ ಅಂಥ ಪ್ರಣಾಳಿಕೆಯನ್ನು ಹೊರಡಿಸದೇ, ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಅಂಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂಬುದೇ ಪಕ್ಷದ ಗುರಿ ಯಾಗಿದೆ ಎಂದು ವಿಧಾನಸಭಾ ಚುನಾವಣೆಯ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಯು.ಬಿ. ಮಂಜಯ್ಯ ಹೇಳಿದರು.ಪಟ್ಟಣದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು.

ಸಂವಿಧಾನದಲ್ಲಿ ತಿಳಿಸಿರುವ ಎಲ್ಲಾ ಜಾತಿ, ಧರ್ಮ, ವರ್ಗದ ಜನರು ಸಮಾನತೆಯಿಂದ ಬಾಳಬೇಕು, ದೇಶದ ಸಮಗ್ರ ಅಭಿವೃದ್ಧಿಗೆ, ಜನರ ಹಿತರಕ್ಷಣೆಗೆ ಬೇಕಾದ ಎಲ್ಲಾ ಅಂಶಗಳೂ ಸಂವಿಧಾನದಲ್ಲಿದ್ದು, ಅವುಗಳೆಲ್ಲವನ್ನೂ ಸಮರ್ಪಕವಾಗಿ ಜಾರಿಗೊಳಿಸಬೇಕೆಂಬ ಗುರಿ ಬಹುಜನ ಸಮಾಜ ಪಕ್ಷದ ಪ್ರಧಾನ ಪ್ರಣಾಳಿಕೆಯಾಗಿದೆ ಎಂದು ತಿಳಿಸಿದರು.

  ಸುದ್ದಿಗೋಷ್ಠಿಯಲ್ಲಿ ಪಕ್ಷದ ತಾಲ್ಲೂಕು ಅಧ್ಯಕ್ಷ ರವೂಫ್‌ಖಾನ್, ಕಾರ್ಯದರ್ಶಿ ರಾಮ, ಪಿ.ಕೆ. ಮಂಜುನಾಥ, ರಾಘವೇಂದ್ರ, ಸೋಮಶೇಖರ್, ಝಾಕೀರ್‌ಆಲಿ ಮುಂತಾದವರಿದ್ದರು.

ಮತದಾರ ಜಾಗೃತಿ ಕಾರ್ಯಕ್ರಮ ಮೇ 2ಕ್ಕೆ
ನರಸಿಂಹರಾಜಪುರ:
ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೂಳ್ಳುವಿಕೆ (ಸ್ವೀಪ್) ಅನುಷ್ಠಾನದ ಪೂರ್ವಭಾವಿ ಸಭೆ  ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆಯಿತು.

ಸಭೆಯಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತುಅರಿವು ಮೂಡಿಸುವ ಸಲುವಾಗಿ ಪಟ್ಟಣದ ಬಸ್‌ನಿಲ್ದಾಣದಲ್ಲಿ ಮಾನವ ಸರಪಳಿ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಕುಮಾರ್‌ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT