ಕೊಳ್ಳೇಗಾಲ: ಗ್ರಾಮಕ್ಕೆ ಸಂಪರ್ಕ ಸೇತುವೆ ನಿರ್ಮಿಸದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಘಟನೆ ತಾಲ್ಲೂಕಿನ ಯಡಕುರಿಯ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಸತ್ತೇಗಾಲ ಸಮೀಪದ ಯಡಕುರಿಯ ಜನತೆ ಗ್ರಾಮದ ಬಳಿ ಹರಿಯುವ ಕಾವೇರಿ ನದಿಗೆ ಸೇತುವೆ ನಿರ್ಮಿಸಿಕೊಡುವಂತೆ ಹಲವು ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇಲ್ಲಿಗೆ ಮತಯಾಚನೆಗೆ ಬರುವ ಎಲ್ಲ ಪಕ್ಷಗಳ ಮುಖಂಡರು ಭರವಸೆ ನೀಡುತ್ತಲೇ ಬಂದಿದ್ದು ಈವರೆಗೂ ಸೇತುವೆ ನಿರ್ಮಾಣವಾಗಿಲ್ಲ.
ಗ್ರಾಮದ ಬಸವೇಶ್ವರ ದೇವಾಲಯದ ಮುಂಭಾಗ ಬುಧವಾರ ಸಂಜೆ ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಸಭೆ ನಡೆಸಿದರು. ಪ್ರತಿ ಚುನಾವಣೆ ಸಂದರ್ಭದಲ್ಲೂ ಭರವಸೆ ನೀಡುತ್ತಾ ನಂಬಿಕೆ ದ್ರೋಹ ಮಾಡುತ್ತಿರುವ ಜನಪ್ರತಿನಿಧಿಗಳ ಆಮಿಷ ಮತ್ತು ಸುಳ್ಳು ಭರವಸೆಗೆ ಒಳಗಾಗದೆ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಂಡಿದ್ದಾರೆ.
ಯಜಮಾನರುಗಳಾದ ಕೆಂಪಪ್ಪ, ಹುಚ್ಚೇಗೌಡ, ಶಂಕರಪ್ಪ, ಎಂ. ಬಸವರಾಜು, ಗುರುಸ್ವಾಮಿ ಇತರೆ ಮುಖಂಡರುಗಳು ಹಾಜರಿದ್ದರು.