ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚುನಾವಣೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ'

Last Updated 22 ಏಪ್ರಿಲ್ 2013, 9:58 IST
ಅಕ್ಷರ ಗಾತ್ರ

ಮಂಗಳೂರು: `ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ' ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು.

ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜಕೀಯ ಪಕ್ಷಗಳ ಮತ್ತು ಚುನಾವಣಾ ವೀಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. `ಚುನಾವಣಾ ಆಯೋಗದ ನಿರ್ದೇಶನದಡಿ ಜಿಲ್ಲಾಡಳಿತ ಸುವ್ಯವಸ್ಥಿತ ಚುನಾವಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾನೂನು ಪಾಲನೆಗೆ ಪೂರಕವಾಗಿ ಎಲ್ಲ ಕ್ರಮಗಳನ್ನು ತಂತ್ರಜ್ಞಾನಗಳನ್ನು ಬಳಸಿ ಅಳವಡಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ಎಲ್ಲ ರೀತಿಯ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ' ಎಂದು ತಿಳಿಸಿದರು.
ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಜಿಲ್ಲಾಡಳಿತ ಕೈಗೊಂಡಿರುವ ಎಲ್ಲ ಕ್ರಮಗಳನ್ನು ಹಾಗೂ ವ್ಯವಸ್ಥೆಗಳನ್ನು ರಾಜಕೀಯ ಪಕ್ಷ ಮುಖಂಡರಿಗೆ ಜಿಲ್ಲಾಧಿಕಾರಿಗಳು ವಿವರಿಸಿದರು. ಯಾವುದೇ ಸಮಸ್ಯೆಗೆ 1077 ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಲು ಸೂಚಿಸಿದರು.

`ಗುರುತಿಸಲಾದ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯನ್ನು ಶೀಘ್ರವೇ ವಿತರಿಸಲಾಗುವುದು' ಎಂದ ಅವರು, `ಸ್ವೀಪ್‌ನಿಂದಾಗಿ (ಮತದಾರರ ಜಾಗೃತಿ ಕಾರ್ಯಕ್ರಮ) ಮತದಾರರ ಪಟ್ಟಿಗೆ ಸುಮಾರು 62 ಸಾವಿರ ಹೆಸರು ಸೇರ್ಪಡೆಗೊಂಡಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಸರ್ವಿಸ್ ವೋಟ್‌ಗಳು ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ' ಎಂದು ತಿಳಿಸಿದರು.

`ಮತದಾನ ಮಾಡಲು ಬಿಎಲ್‌ಒಗಳು ಕೊಡುವ ವೋಟರ್ ಸ್ಲಿಪ್ ಕಾನೂನುಬದ್ಧವಾಗಿದ್ದು, ಇತರ ಯಾವುದೇ ಗುರುತುಪತ್ರ ಮತದಾನ ಮಾಡಲು ಅಗತ್ಯವಿರುವುದಿಲ್ಲ. ಹಾಗಾಗಿ ಮತದಾರರು ತಮ್ಮ ಮತ ಚಲಾಯಿಸಲು ವೋಟರ್ ಸ್ಲಿಪ್ ಬಳಸಿಕೊಳ್ಳಬಹುದು' ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪೊಲೀಸ್ ಆಯುಕ್ತ ಮನೀಷ್ ಖರ್ಬಿಕರ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ, ಪಾಲಿಕೆ ಆಯುಕ್ತರಾದ ಡಾ. ಹರೀಶ್, ಚುನಾವಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಅಭಿಷೇಕ್ ಗೋಯಲ್ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT