ಚುನಾವಣೆವರೆಗೆ ಆಡಳಿತಾಧಿಕಾರಿ ನೇಮಕ
ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯ್ತಿಯ ಅಧಿಕಾರ ಅವಧಿ ಜನವರಿ 26ರಂದು ಕೊನೆ ಗೊಳ್ಳಲಿದ್ದು, ಅವಧಿ ಮುಕ್ತಾಯ ದಿನಾಂಕದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ಪ್ರಾದೇಶಿಕ ಆಯುಕ್ತರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಲ್ಲದೆ, ಅವಧಿ ಮುಗಿದ ತಾಲ್ಲೂಕು ಪಂಚಾಯ್ತಿಗಳಿಗೆ ಉಪ ವಿಭಾಗಾಧಿ ಕಾರಿ ಅಥವಾ ಉಪ ವಿಭಾಗಾಧಿಕಾರಿ ಹುದ್ದೆಯ ಸಮಾನ ಶ್ರೇಣಿ ಹೊಂದಿರುವ ಇತರೆ ಅಧಿಕಾರಿಗಳನ್ನು ಆಡಳಿತಾಧಿಕಾರಿ ಯನ್ನಾಗಿ ನೇಮಕ ಮಾಡುವ ಅಧಿಕಾರವನ್ನು ಜಿಲ್ಲಾಧಿ ಕಾರಿಗಳಿಗೆ ನೀಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಸ್ವರ್ಣಲತಾ ಎಂ. ಭಂಡಾರೆ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ ಮೀಸಲಾತಿ ನಿಗದಿಪಡಿಸಲಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಅವಧಿ ಮುಗಿದ ನಂತರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಾದೇಶಿಕ ಆಯುಕ್ತರು ಚುನಾವಣಾ ವೇಳಾಪಟ್ಟಿ ನಿಗದಿಪಡಿಸಬೇಕಾಗುತ್ತದೆ.
ಪ್ರಸ್ತುತ ಜಿ.ಪಂ. ಪ್ರಭಾರ ಅಧ್ಯಕ್ಷೆಯಾಗಿ ಅನಿತಾ ಕಂಜಿತಂಡ ಕಾರ್ಯನಿರ್ವಹಿಸುತ್ತಿದ್ದು, ಜಿ.ಪಂ. ಮೂರನೇ ಅವಧಿಯ ಅಧಿಕಾರ ಜ. 26ಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆ ಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯ ಬೇಕಾಗುತ್ತದೆ. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯುವವರೆಗೆ ಪ್ರಾದೇಶಿಕ ಆಯುಕ್ತರೇ ಆಡಳಿತಾಧಿ ಕಾರಿಯಾಗಿ ಕಾರ್ಯನಿರ್ವಹಿಸ ಲಿದ್ದಾರೆ.
ಮಡಿಕೇರಿ ತಾಲ್ಲೂಕು ಪಂಚಾ ಯ್ತಿಯ ಆಡಳಿತ ಅವಧಿ ಜ. 23, ವಿರಾಜಪೇಟೆ ತಾಲ್ಲೂಕು ಪಂಚಾ ಯ್ತಿಯ ಅವಧಿ ಜ. 24 ಹಾಗೂ ಸೋಮವಾರಪೇಟೆ ತಾಲ್ಲೂಕು ಪಂಚಾಯ್ತಿಯ ಅಧಿಕಾರ ಅವಧಿ ಜ. 27ರಂದು ಕೊನೆ ಗೊಳ್ಳಲಿದೆ. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯುವವರೆಗೆ ಉಪ ವಿಭಾಗಾಧಿ ಕಾರಿ ಹಾಗೂ ಉಪ ವಿಭಾಗಾಧಿಕಾರಿ ಸಮಾನ ಶ್ರೇಣಿಯ ಅಧಿಕಾರಿಗಳನ್ನು ತಾ.ಪಂ.ಗಳ ಆಡಳಿ ತಾಧಿ ಕಾರಿಯನ್ನಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಸರ್ಕಾರ ಆದೇಶಿಸಿದೆ.
ಈ ಮಧ್ಯೆ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಹೊಸ ಚುನಾಯಿತ ಸದಸ್ಯರ ಹೆಸರನ್ನು 1993ರ ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ 172ರಂತೆ ಅಧಿಸೂಚಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ ಮೀಸಲಾತಿಯನ್ನೂ ನಿಗದಿಪಡಿಸಲಾಗಿದೆ.
ಪ್ರಥಮ ಸಭೆಯಿಂದ ಹೊಸ ಅವಧಿ ಪ್ರಾರಂಭ: 1993ರ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 173 (1) ಮತ್ತು (2)ರ ಪ್ರಕಾರ, ಜಿಲ್ಲಾ ಪಂಚಾಯ್ತಿಗೆ ಮತ್ತು ಪ್ರಕರಣ 134 (1) ಹಾಗೂ (2)ರ ಪ್ರಕಾರ ತಾಲ್ಲೂಕು ಪಂಚಾಯ್ತಿಗೆ ಚುನಾಯಿತರಾದ ಸದಸ್ಯರ ಅವಧಿ ಐದು ವರ್ಷಗಳಾಗಿದ್ದು, ಈ ಅವಧಿ ಪ್ರಥಮ ಸಭೆಗೆ ನಿಗದಿಪಡಿಸಿದ ದಿನಾಂಕದಿಂದ ಪ್ರಾರಂಭವಾಗಲಿದೆ.
ಹೊಸದಾಗಿ ಚುನಾಯಿತರಾದ ಸದಸ್ಯರ ಅವಧಿ ಪ್ರಥಮ ಸಭೆಯಿಂದ ಪ್ರಾರಂಭವಾಗುವುದರಿಂದ ಈ ಅವಧಿಯಲ್ಲಿ ಅಂದರೆ, ಈಗಿರುವ ಜಿಲ್ಲಾ ಪಂಚಾಯ್ತಿ/ ತಾಲ್ಲೂಕು ಪಂಚಾಯ್ತಿಗಳಲ್ಲಿ ಸಾಮಾನ್ಯ ಸಭೆ ನಡೆಸಲು ಅವಕಾಶವಿದೆ. ಆದರೆ, ಇಂತಹ ಸಭೆಗಳಲ್ಲಿ ಜಿಲ್ಲಾ ಪಂಚಾಯ್ತಿ/ ತಾಲ್ಲೂಕು ಪಂಚಾಯ್ತಿಗಳು ಕೈಗೊಳ್ಳಬಹುದಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಕ್ರಿಯಾ ಯೋಜನೆಗಳ ಅನುಮೋದನೆ ನೀಡುವುದನ್ನು ಹೊರತುಪಡಿಸಿ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು.
ಪ್ರಸ್ತುತವಿರುವ ಜಿ.ಪಂ. ತಾ. ಪಂ. ಗಳ ಅವಧಿ ಮುಕ್ತಾಯವಾಗುವ ದಿನಾಂಕವನ್ನು ಗಮನದಲ್ಲಿಟ್ಟು ಕೊಂಡು ಪ್ರಥಮ ಸಭೆಗೆ ದಿನ ನಿಗದಿಪಡಿಸಲು ಸಕ್ಷಮ ಪ್ರಾಧಿಕಾರಿ ಗಳು ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸ್ವರ್ಣಲತಾ ಎಂ. ಭಂಡಾರೆ ಸೂಚಿಸಿದ್ದಾರೆ.
ಒಟ್ಟು 29 ಸದಸ್ಯ ಬಲವಿರುವ ಜಿ.ಪಂ.ನಲ್ಲಿ 21 ಮಂದಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದು, ಈ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ಬಿಜೆಪಿ ಮೂಲಗಳ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ ಶಾಂತೆಯಂಡ ರವಿಕುಶಾಲಪ್ಪ ಪ್ರಬಲ ಆಕಾಂಕ್ಷಿಯಾಗಿದ್ದು, ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಭಾರತೀಶ್ ಕೂಡ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹೆಬ್ಬಾಲೆ ಕ್ಷೇತ್ರದ ಇಂದಿರಮ್ಮ ಹಾಗೂ ಅಮ್ಮತ್ತಿ ಕ್ಷೇತ್ರದ ಕಾವೇರಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.