ಚೆನ್ನೈ (ಪಿಟಿಐ): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
`ಚೆನ್ನೈ ಹಾಗೂ ಪುದುಚೆರಿಯಲ್ಲಿಯೂ ಮಳೆ ಅಥವಾ ತುಂತುರು ಮಳೆ ಬೀಳುವ ಸಂಭವ ಇದೆ' ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುವಣ್ಣಾಮಲೈ ಜಿಲ್ಲೆಯಲ್ಲಿ 11 ಸೆಂ.ಮಿ ಭಾರಿ ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆ 8.30ರಿಂದ ಗಿಂಡಿ, ಮೀನಂಬಾಕಂ ಹಾಗೂ ಎಗ್ಮೋರ್ ಸೇರಿದಂತೆ ಚೆನ್ನೈನ ಹಲವೆಡೆ ತಲಾ ಐದು ಸೆಂ.ಮಿ ಭಾರಿ ಮಳೆಯಾಗಿದೆ.
ಸೋಮವಾರದಿಂದ ಚೆನ್ನೈ ನಗರದಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚೆನ್ನೈ ಹಾಗೂ ನೆರೆ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.