ಚೆನ್ನೈ: ಕರ್ನಾಟಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಪುರಂದರ ದಾಸರ ಆರಾಧನಾ ಮಹೋತ್ಸವ ನಡೆಯಿತು. ಮುಖ್ಯ ಅತಿಥಿ ಕೆ.ಗಂಗಾಪ್ರಸಾದ್ ಅವರು ಪುರಂದರದಾಸರ ವೈಶಿಷ್ಟ್ಯಗಳನ್ನು ವಿವರಿಸಿದರು. ಸಂಘದ ಸದಸ್ಯರಿಗೆ ಹಾಗೂ ಇತರರಿಗೆ ಕೀರ್ತನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸಂಘದ ಪ್ರೌಢಶಾಲೆಯು ಅಂತರ್ ಶಾಲಾ ಕೀರ್ತನೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು.
ವಿಜೇತರಾದವರಿಗೆ ಕೆ.ಗಂಗಾಪ್ರಸಾದ್ ಮತ್ತು ರಾಜಾರಾವ್ ಅವರು ಬಹುಮಾನ ವಿತರಿಸಿದರು. ಸಂಜಯ್ ಕೃಷ್ಣಮೂರ್ತಿ ಮತ್ತು ರಾಜಶ್ರೀ ತಂಡದಿಂದ ದಾಸರ ಹಾಡುಗಳ ಸಂಗೀತ ಕಚೇರಿ ನಡೆಯಿತು. ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಕೆ.ಪಿ. ಆಚಾರ್ಯ, ಕಾರ್ಯದರ್ಶಿ ಶಶಿಕಲಾ ರಾವ್, ಖಜಾಂಚಿ ಎಚ್.ಗಣೇಶ್ ನಾಯಕ್ ಉಪಸ್ಥಿತರಿದ್ದರು.
ಮುಂಬೈಯಲ್ಲಿ ಪುರಂದರ ಆರಾಧನೆ
ಮುಂಬೈ: ಇಲ್ಲಿನ ಮಾಟುಂಗಾದಲ್ಲಿರುವ ಮುಂಬೈ ಕನ್ನಡ ಸಂಘದ ಆಶ್ರಯದಲ್ಲಿ ಪುರಂದರ ದಾಸರ ಆರಾಧನೆ ಇತ್ತೀಚೆಗೆ ನಡೆಯಿತು. ಉದ್ಯಮಿ ಶೇಖರ್ ಆರ್. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಗುರುರಾಜ್ ನಾಯಕ್ ಅವರು `ಸಂಘದ ಅಮೃತಮಹೋತ್ಸವದ ಸಮಾರೋಪ ಸಮಾರಂಭ ಮಾರ್ಚ್ 17 ಮತ್ತು 18ರಂದು ಮಾಟುಂಗಾದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆಯಲಿದೆ ಎಂದು ಹೇಳಿದರು.
ಗಾಯಕಿ ಶ್ಯಾಮಲಾ ಪ್ರಕಾಶ್ ಅವರು ಸಂಗೀತ ಕಾರ್ಯಕ್ರಮ ನೀಡಿದರು. ವಿವಿಧ ಪರೀಕ್ಷೆಗಳಲ್ಲಿ ಉನ್ನತ ಸ್ಥಾನಗಳಿಸಿದವರಿಗೆ ಇದೇ ಸಂದರ್ಭದಲ್ಲಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಳೆದ 75ವರ್ಷಗಳಿಂದ ಕನ್ನಡ ಸಂಘ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶೇಖರ್ ಶೆಟ್ಟಿ ಅವರು ಸ್ಮರಿಸಿದರು.ಸ್ಪರ್ಧೆಗಳ ತೀರ್ಪುಗಾರರಾಗಿ ವಿದ್ವಾನ್ ಟಿ.ಎನ್. ಅಶೋಕ್, ಗಾಯಕಿ ಶ್ಯಾಮಲಾ ರಾಧೇಶ್ ಮತ್ತು ಹಿಂದೂಸ್ತಾನಿ ಗಾಯಕ ಬಾಲಕೃಷ್ಣ ಎನ್. ನಾಯಕ್ ಅವರು ಸಹಕರಿಸಿದ್ದರು.