ಮೈಸೂರು: ಕರ್ನಾಟಕದ ಅಗ್ರ ಶ್ರೇಯಾಂಕದ ಆಟಗಾರರಾದ ಎ.ಆಗಸ್ಟಿನ್, ಗವಿಸಿದ್ದಯ್ಯ ಅವರು ಇಲ್ಲಿ ನಡೆಯುತ್ತಿರುವ 3ನೇ ಎಂಡಿಸಿಎ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಿಯ 3ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು.
ಎಂಜಿನಿಯರ್ ಸಂಸ್ಥೆಯಲ್ಲಿ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಈ ಟೂರ್ನಿಯಲ್ಲಿ ಆಗಸ್ಟಿನ್ ಅವರು ಭಂಡಾರಿ ನಿಲೇಶ್ ವಿರುದ್ಧ, ಗವಿಸಿದ್ದಯ್ಯ ಅವರು ನಿಖಿಲ್ ಆರ್.ಉಮೇಶ್ ವಿರುದ್ಧ, ಆದಿತ್ಯ ಚಕ್ರವರ್ತಿ ಅವರು ತಮಿಳುನಾಡಿನ ಎಸ್.ಜಾನ್ ಜೋಸೆಫ್ ವಿರುದ್ಧ, ಭಾರದ್ವಾಜ್ಅಕ್ಷಯ್ ಅವರು ಆಂಧ್ರಪ್ರದೇಶದ ಹರ್ಷಿತಾ ಗುಡ್ಡಂತಿ ವಿರುದ್ಧ ಗೆಲುವು ಸಾಧಿಸಿ 3ನೇ ಸುತ್ತಿನ ಬಳಿಕ ತಲಾ 2 ಪಾಯಿಂಟ್ಸ್ ಗಳಿಸಿದ್ದಾರೆ.
ತಮಿಳುನಾಡಿನ ಅಗ್ರ ಶ್ರೇಯಾಂಕದ ಆಟಗಾರರಾದ ಸೈಯದ್ ಅನ್ವರ್ ಶಾಜುಲಿ, ಆರ್.ಪಿ. ಸೆಂದಿಲ್ ಕುಮಾರನ್, ಎಸ್.ಜಯಕುಮಾರ್ ಅವರು ಉತ್ತಮ ಆಟ ಪ್ರದರ್ಶಿಸಿ ತಲಾ 2 ಪಾಯಿಂಟ್ಸ್ ಗಳಿಸಿದ್ದಾರೆ. ತಮಿಳುನಾಡಿನ ಫಿಡೆ ಮಾಸ್ಟರ್(ಎಫ್ಎಂ) ಆರ್.ಪ್ರಜ್ಞಾನಂದ ಅವರು ಕರ್ನಾಟಕದ ಕೆ.ಎಸ್.ರಘುನಂದನ್ ವಿರುದ್ಧ ಜಯ ದಾಖಲಿಸಿದರು. ತಮಿಳುನಾಡಿನ ಮತ್ತೊಬ್ಬ ಅಗ್ರ ಶ್ರೇಯಾಂಕಿತ ಆಟಗಾರ್ತಿ ಆರ್.ವೈಷ್ಣವಿ (ಡಬ್ಲ್ಯುಎಫ್ಎಂ) ಅವರು ಮೈಸೂರಿನ ಎಸ್.ಎಂ.ರವಿಪ್ರಕಾಶ್ ವಿರುದ್ಧ ಜಯ ಗಳಿಸಿದರು. ಮೈಸೂರಿನ ಬಿ.ಎನ್.ಗಂಗಮ್ಮ ಅವರು ನಮ್ಮ ರಾಜ್ಯದವರೇ ಆದ ಅಕ್ಷಯ್ ವಿ.ಹಲಗಣ್ಣವರ್ ವಿರುದ್ಧ ಸೋಲು ಅನುಭವಿಸಿದರು.