ಮಂಗಳೂರು: ಕರ್ನಾಟಕದ ಮೂವರು- ಅನಿಶ್ಚರಿತ್ ಭಂಡಾರಿ, ರೀಶಾ ಶೆಣೈ ಮತ್ತು ಚೈತನ್ಯ ಶ್ಯಾಮ್, ಚೆಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ನಗರದಲ್ಲಿ ಗುರುವಾರ ಮುಕ್ತಾಯಗೊಂಡ ರಾಷ್ಟ್ರೀಯ 10 ಮತ್ತು 14 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದು ಗಮನ ಸೆಳೆದರು.
ಡೆರಿಕ್ಸ್ ಚೆಸ್ ಸ್ಕೂಲ್ ಆಶ್ರಯದಲ್ಲಿ ಮಾರ್ಗನ್ಸ್ಗೇಟ್ನ ಲೋಬೋಸ್ ರಿವರ್ವ್ಯೆದಲ್ಲಿ ನಡೆದ ಈ ಚಾಂಪಿಯನ್ಷಿಪ್ನಲ್ಲಿ ಅನಿಶ್ಚರಿತ ಭಂಡಾರಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಂಟು ಸುತ್ತುಗಳಿಂದ 6.5 ಪಾಯಿಂಟ್ಸ್ ಸಂಗ್ರಹಿಸಿದರು.
ಆಕಾಶ್ ಗಾಂಧಿ (ಮಹಾರಾಷ್ಟ್ರ) ಮತ್ತು ನಮನ್ ಶೆಟ್ಟಿ (ಕರ್ನಾಟಕ) ಕೂಡ ಇಷ್ಟೇ ಪಾಯಿಂಟ್ಸ್ ಸಂಗ್ರಹಿಸಿದರೂ, ಕಡಿಮೆ ಟೈಬ್ರೇಕ್ ಸ್ಕೋರ್ನಿಂದಾಗಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಸರಿಯಬೇಕಾಯಿತು.
ಇದೇ ವಯೋವರ್ಗದ ಬಾಲಕಿಯರ ವಿಭಾಗದಲ್ಲಿ ರೀಶಾ ಏಳು ಸುತ್ತುಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿದರು. ಎರಡನೇ ಸ್ಥಾನ ಪಡೆದ ಪ್ರೇಮಾ ರೈ (ಕರ್ನಾಟಕ) ಐದೂವರೆ ಪಾಯಿಂಟ್ಸ್ ಸಂಗ್ರಹಿಸಿದರೆ, ಮಹಾರಾಷ್ಟ್ರದ ಸಾಕ್ಷಿ ದಿನೇಶ್ (5) ಮೂರನೇ ಸ್ಥಾನ ಪಡೆದರು.
ಬಾಲಕರ 10 ವರ್ಷದೊಳಗಿನವರ ವಿಭಾಗದಲ್ಲಿ ಚೈತನ್ಯ ಶ್ಯಾಮ್ ಎಂಟು ಸುತ್ತುಗಳಿಂದ ಆರೂವರೆ ಪಾಯಿಂಟ್ಸ್ ಶೇಖರಿಸಿದರು. ಇಷ್ಟೇ ಪಾಯಿಂಟ್ಸ್ ಸಂಗ್ರಹಿಸಿದರೂ ಕಡಿಮೆ ಟೈಬ್ರೇಕ್ ಅಂಕದಿಂದಾಗಿ ಉತ್ತರ ಪ್ರದೇಶದ ಆರ್ಯಾಂಶ್ ಚತುರ್ವೇದಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕರ್ನಾಟಕದ ಎ.ಅನುತ್ತಮ (6) ಮೂರನೇ ಸ್ಥಾನ ಪಡೆದರು.
ಉತ್ತರಪ್ರದೇಶ ಮೇಲುಗೈ: ಇದೇ ವಯೋವರ್ಗದ ಬಾಲಕಿಯರ ವಿಭಾಗದಲ್ಲಿ ಉತ್ತರಪ್ರದೇಶ ಆಟಗಾರ್ತಿಯರು ಪಾರಮ್ಯ ಮೆರೆದರು. ಉತ್ತಮ ಪ್ರದರ್ಶನ ನೀಡಿದ ರುಕ್ಸಾರ್ ಬಾನೊ (7 ಸುತ್ತುಗಳಿಂದ 6) ಪ್ರಶಸ್ತಿ ಗೆಲ್ಲಲು ಕಷ್ಟಪಡಲಿಲ್ಲ. ಪ್ರಿಯಾ ನಿಷಾದ್ ಮತ್ತು ಮಫ್ರೂಜಾ ಫಾರೂಕಿ (ತಲಾ 5.5 ಪಾಯಿಂಟ್ಸ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.