ಹುಬ್ಬಳ್ಳಿ: ದಿನದ ಎರಡೂ ಸುತ್ತುಗಳನ್ನು ಗೆದ್ದ ಮೈಸೂರಿನ ಎಂ.ಎಸ್.ತೇಜ್ಕುಮಾರ್ ಇಲ್ಲಿ ನಡೆಯುತ್ತಿರುವ ನೈರುತ್ಯ ರೈಲ್ವೆ ಕ್ರೀಡಾ ಸಂಘ ಆಶ್ರಯದ ಅಖಿಲ ಭಾರತ ರೈಲ್ವೆ ಚೆಸ್ ಚಾಂಪಿಯನ್ಷಿಪ್ನ ವೈಯಕ್ತಿಕ ವಿಭಾಗದಲ್ಲಿ ಮುನ್ನಡೆ ಸಾಧಿಸಿದರು.
ಗದಗ ರಸ್ತೆಯ ಲೋಕೋಶೆಡ್ ಸಭಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನಲ್ಲಿ ಬೆಳಿಗ್ಗೆ ವಾಯವ್ಯ ರೈಲ್ವೆಯ ಸುಧಾಕರ್ ವಿರುದ್ಧ ಜಯ ಸಾಧಿಸಿದ ತೇಜ್ ಮಧ್ಯಾಹ್ನ ನಡೆದ ಎರಡನೇ ಸುತ್ತಿನಲ್ಲಿ ದಕ್ಷಿಣ ಕೇಂದ್ರ ರೈಲ್ವೆಯ ವೇದಾದ್ರಿ ವಿರುದ್ಧ ಗೆಲುವು ದಾಖಲಿಸಿದರು.
ನೈರುತ್ಯ ರೈಲ್ವೆಯ ಹಿಮಾಂಶು ಶರ್ಮಾ ಹಾಗೂ ದತ್ತಾ ಜಯದೀಪ್, ಪಶ್ಚಿಮ ರೈಲ್ವೆಯ ಅರ್ಜುನ್ ತಿವಾರಿ, ಪಂಕಜ್ ಜೋಶಿ, ಐಸಿಎಫ್ನ ಗುಣಶೇಖರ ಕೂಡ ಎರಡೂ ಸುತ್ತುಗಳಲ್ಲಿ ಜಯ ಸಾಧಿಸಿ ನಗೆ ಸೂಸಿದರು.
ಫಲಿತಾಂಶಗಳು
ಎರಡನೇ ಸುತ್ತು: ತೇಜ್ಕುಮಾರ್ಗೆ ದಕ್ಷಿಣ ಕೇಂದ್ರ ರೈಲ್ವೆಯ ಕೆ.ವೇದಾದ್ರಿ ವಿರುದ್ಧ, ಹಿಮಾಂಶು ಶರ್ಮಾಗೆ ಆಗ್ನೇಯ ರೈಲ್ವೆಯ ರಾಜೇಶ್ ಕುಮಾರ್ ವಿರುದ್ಧ, ದತ್ತಾ ಜಯದೀಪ್ಗೆ ಸಿಎಲ್ಡಬ್ಲ್ಯುನ ದೇಬಾಶಿಸ್ ಗೋಶಾಲ್ ವಿರುದ್ಧ, ಅಭಿಷೇಕ್ ದಾಸ್ಗೆ ಪಶ್ಚಿಮ ಕೇಂದ್ರ ರೈಲ್ವೆಯ ಸೋಹನ್ಲಾಲ್ ವಿರುದ್ಧ ಜಯ; ದಕ್ಷಿಣ ರೈಲ್ವೆಯ ಎಸ್.ಸಿ. ಸುಬ್ರಹ್ಮಣ್ಯನ್ಗೆ ಕೇಂದ್ರ ರೈಲ್ವೆಯ ಆಕಾಶ್ ಠಾಕೂರ್ ವಿರುದ್ಧ, ರವಿಚಂದ್ರನ್ ವೆಂಕಟರಾಮನ್ಗೆ ಆಗ್ನೇಯ ರೈಲ್ವೆಯ ಇಮ್ರಾನ್ ಹುಸೇನ್ ವಿರುದ್ಧ ಜಯ ಪಡೆದರು.