ಬಳ್ಳಾರಿ: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿರುವ ಎರ್ರಿಸ್ವಾಮಿ ಮಠದ ಎರ್ರಿತಾತನ ಮಹಾ ರಥೋತ್ಸವವು ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿಭಾಗದ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಮಠದ ಆವರಣದಲ್ಲಿ ರಥೋತ್ಸವದ ಅಂಗವಾಗಿ ಉರವಕೊಂಡ ಸಂಸ್ಥಾನದ ಗವಿಮಠದ ಶ್ರೀ ಚನ್ನಬಸವ ರಾಜೇಂದ್ರ ಸ್ವಾಮೀಜಿ ಅವರಿಂದ ನಂದಿ ಧ್ವಜಾರೋಹಣ ನೆರವೇರಿತಲ್ಲದೆ, ಸತತ ಒಂದು ವಾರ ನಡೆದ ಸಪ್ತಭಜನೆಯ ಸಮಾರೋಪವೂ ನಡೆಯಿತು.
ಎರ್ರಿ ತಾತನ ಬೆಳ್ಳಿ ರಥೋತ್ಸವ, ಬಸವ ಉತ್ಸವದ ಬಳಿಕ ಸಂಜೆ ಮಹಾ ರಥೋತ್ಸವವು ಭಕ್ತರ ಹರ್ಷೋದ್ಘಾರಗಳ ನಡುವೆ ನಡೆಯಿತು.
ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಇಷ್ಟಾರ್ಥ ಸಿದ್ಧಿಯ ಬೇಡಿಕೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಿದರು. ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತ ಸಮೂಹ ಉತ್ತಮ ಬೆಳೆ ದೊರೆಯಲಿ ಎಂಬ ಆಶಾಭಾವದೊಂದಿಗೆ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿತು.
ಜಾತ್ರೆಯ ಅಂಗವಾಗಿ ಸೋಮವಾರ ಸಂಜೆ ಹೂವಿನ ರಥೋತ್ಸವ ಹಾಗೂ ಬಾಣ ಬಿರುಸಿನ ಉತ್ಸವವನ್ನೂ ಏರ್ಪಡಿಸಲಾಗಿದೆ.
ಗಡಿ ಭಾಗದಲ್ಲಿರುವ ಚೇಳ್ಳಗುರ್ಕಿಗೆ ಆಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಗಳಿಂದ, ಮಹಾರಾಷ್ಟ್ರದ ವಿವಿಧೆಡೆಯಿಂದ ಹಾಗೂ ನೆರೆಯ ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕೊಪ್ಪಳ, ಗದಗ ಮತ್ತಿತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಅಪಾರ ಸಂಖ್ಯೆಯ ಭಕ್ತರು ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.