ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡೇಶ್ವರಿ ದೇವಿ ಜಾತ್ರೆಗೆ ಚಾಲನೆ

Last Updated 25 ಜನವರಿ 2011, 12:05 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಮಾರುತಿ ನಗರದ ಬೆಂಚಿನಮರಡಿಯ ತುಂಗಾಜಲ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿ ಮೂರ್ತಿಯ ರಥದ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ಈಡಿ ದಿನ ನಡೆಯಿತು. ಸಹಸ್ರಾರು ಭಕ್ತರ ಮಧ್ಯೆ ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ದೇವಿ ಮನೆಯಿಂದ ಪ್ರಾರಂಭವಾಗಿ ರಾತ್ರಿ 7 ಗಂಟೆಗೆ ಯರೇಕುಪ್ಪಿಯ ರಸ್ತೆಯ ಮಾರುತಿ ನಗರದಲ್ಲಿರುವ ಬೆಂಚಿನಮರಡಿ ದೇವಸ್ಥಾನ ತಲುಪಿತು.

ಮಾರುತಿ ನಗರದಲ್ಲಿ ಶಾಸಕ ಜಿ. ಶಿವಣ್ಣ ಹಾಗೂ ನಗರಸಭಾ ಅಧ್ಯಕ್ಷ ರಾಮಣ್ಣ ಕೋಲಕಾರ ಮೆರವಣಿಗೆಗೆ ಚಾಲನೆ ನೀಡಿದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ ಪೂಜಾರ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮನಾಥ ಹಿರೇಮಠ ನಗರಸಭಾ ಸದಸ್ಯರಾದ ವೀರಣ್ಣ ಅಂಗಡಿ, ರಮೇಶ ಗುತ್ತಲ, ಬಸವರಾಜ ಗೌಳಿ, ಮಂಜುನಾಥ ಗೌಡಶಿವಣ್ಣನವರ, ಡಾ.ಗಣೇಶ ದೇವಗಿರಿಮಠ, ಬಸವರಾಜ ರೊಡ್ಡನವರ, ಬಸವರಾಜ ಲಕ್ಷ್ಮೇಶ್ವರ, ಕಮಲಾಕ್ಷಿ ಚಿನ್ನಿಕಟ್ಟಿ, ಅನುಸೂಯಾ ಮಲ್ಲೂರು ಹಾಜರಿದ್ದರು.

ದೇವಿಯ ಆರಾಧಕರು ಮತ್ತು ಜೋಗಮ್ಮರು ಮೆರವಣಿಗೆಯುದ್ದಕ್ಕೂ ಛತ್ರ, ಚಾಮರ ಬೀಸಿದರು. ಮೆರವಣಿಗೆ ಬೀದಿಯಲ್ಲಿ ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು, ಸುಮಂಗಲೆಯರ ಆರತಿ, ಕುಂಭಮೇಳ ಗಮನ ಸೆಳೆದವು. ಅರಳೀಕಟ್ಟಿ ಬೀರೇಶ್ವರ ಯುವಕ ಸಂಘದ ಡೊಳ್ಳಿನ ಕೈಪೆಟ್ಟು, ಅಟವಾಳಗಿ ಸಹೋದರರ ಸಮಾಳ, ಕರಡಿ ಮಜಲು, ಭಾಜಾ ಭಂಜತ್ರಿ, ಕುಬಗೇರಿ ಯುವಕರ ಡೊಳ್ಳಿನ ಮೇಳ, ದುರುಗಮುರಗಿಯರು, ವೇಷಗಾರರು, ಕುದರೆಕುಣಿತ, ಜಗ್ಗಲಗಿ, ಹಲಗೆ, ಜಾಂಜ್ ಮೇಳ, ಭಜನೆ, ಕೋಲಾಟ, ಸಾಹಸಿ ತರುಣರಿಂದ ಲಾಠಿ ಮತ್ತು ಗೋಲ ತಿರುಗಿಸುವುದು, ವಿವಿಧ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆದವು. ಮಜ್ಜಗಿ ಡಿಟಿಎಸ್ ಸೌಂಡ್ ಸಿಸ್ಟಮ್‌ನ ಸಿನೆಮಾ ಭಕ್ತಿಗೀತೆಗಳಿಗೆ ಯುವಕರು ನೃತ್ಯ ಮಾಡಿದರು.

ಕುರಬಗೇರಿ ವೃತ್ತದಲ್ಲಿ ವಿವಿಧ ನಮೂನೆಯ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಮೆರವಣಿಗೆಯುದ್ದಕ್ಕೂ ಸ್ತ್ರೀಶಕ್ತಿ ಸಂಘದ ಸದಸ್ಯೆಯರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಭೈರಪ್ಪ ಹಣಿಗಿ, ಸತ್ಯನಾರಾಯಣ ಅಗಡಿ, ಚೋಳಪ್ಪ ಕಸವಾಳ, ಗೋಪಾಲ ಎನ್. ಗುತ್ತಲ, ವಿನಾಯಕ ಚಿನ್ನಿಕಟ್ಟಿ, ಕುಮಾರ ಮಡಿವಾಳರ, ಸೋಮಶೇಖರ ಗೌಡಶಿವಣ್ಣವರ, ಸಿದ್ದಪ್ಪ ಅತಡಕರ, ದ್ಯಾಮಣ್ಣ ಇನಾಮತಿ, ಪ್ರಕಾಶ ಕೋಳಿವಾಡ, ಚೋಳಪ್ಪ ಕಸವಾಳ, ಖಂಡೋಜಿ. ಬಸವರಾಜ ಹುಚಗೊಂಡರ, ಶಶಿಧರ ಬಸೆನಾಯಕ, ರಮೇಶ ಬಿಸನಳ್ಳಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜ. 25ರಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ 4ಕ್ಕೆ ಟಗರಿನ ಕಾಳಗ, ಸುಮಂಗಲೆಯರಿಗೆ ಉಡಿ ತುಂಬುವುದು ಮತ್ತು ಬಳೆ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.

ಜ. 26ರಂದು ಬೆಳಿಗ್ಗೆ ಓಕುಳಿ, ಉತ್ಸವ, ಬೆಲ್ಲದ ಬಂಡಿ ಮೆರವಣಿಗೆ ಹಾಗೂ ಸಂಜೆ ಮಾರುತಿ ನಗರದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ. 27ರಂದು 6.30ಕ್ಕೆ ಜಾನಪದ ಕಲಾವಿದ ಹಾಲೇಶ ಗುಂಗೇರ ಅವರಿಂದ ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯವುದು. ಜ. 28ರಂದು ಸಂಜೆ 6.30ಕ್ಕೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ. 29ರಂದು ದೇವಿಯನ್ನು ಊರಲ್ಲಿನ ದೇವಿಯ ಮನೆಗೆ ಕರೆತರಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT