ನಾಯಕನಹಟ್ಟಿ: ಸಮೀಪದ ಹಿರೇಕೆರೆ ಕಾವಲಿನ ಅರಣ್ಯ ಪ್ರದೇಶದಲ್ಲಿರುವ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ `ಸಿಡಿ ಮಹೋತ್ಸವ'ವು ವಿಜೃಂಭಣೆಯಿಂದ ನೆರವೇರಿತು.
ಸಂಜೆ 4ಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಸಿಡಿ ಆಡುವ ಕಂಬದ ಬಳಿಗೆ ಸಕಲ ಜಾನಪ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತಂದು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಲಾಯಿತು. ನಂತರ ಕಂಬದ ಕಟ್ಟೆಗೆ ನಾಲ್ಕು ದಿಕ್ಕುಗಳಲ್ಲಿ ಶಾಂತಿಯ ಸಂಕೇತವಾಗಿ ಬಲಿ ಅನ್ನ ಹಾಕಿ ಪೂಜೆ ಸಲ್ಲಿಸಲಾಯಿತು. ತರುವಾಯ ಸಿಡಿ ಕಂಬವನ್ನು ನೂತನ ವಸ್ತ್ರಗಳಿಂದ ಅಲಂಕರಿಸಿ ದೇವರ ಛತ್ರಿಕೆ ಕಟ್ಟಲಾಯಿತು.
ಸಿಡಿ ಆಡುವವರನ್ನು ಕಂಬದ ತುದಿಗೆ ಕಟ್ಟಿ ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಪ್ರತೀ ಬಾರಿಯು ಸಿಡಿ ಕಂಬದಲ್ಲಿರುವ ವ್ಯಕ್ತಿ ಬೇವಿನ ಸೊಪ್ಪು, ಅರಿಷಿಣ, ಕುಂಕುಮವನ್ನು ಕೆಳಗಿರುವ ಭಕ್ತರಿಗೆ ಎರಚುತ್ತಿದ್ದರು. ಭಕ್ತರು ದೇವಿಯ ಪ್ರಸಾದ ಸ್ವೀಕರಿಸುತ್ತಿದ್ದರು.
ಭಕ್ತರು ಬಾಳೆ ಹಣ್ಣನ್ನು ಸಿಡಿಕಂಬಕ್ಕೆ ತೂರಿ ಭಕ್ತಿ ಸಮರ್ಪಿಸುತ್ತಿದ್ದರು. ಮೂರು ದಿನಗಳಿಂದ ಜರುಗಿದ ದೇವಿಯ ಜಾತ್ರೆಗೆ ಬುಧವಾರ ಕಂಕಣ ವಿಸರ್ಜನೆಯೊಂದಿಗೆ ತೆರೆ ಎಳೆಯಲಾಯಿತು. ಅಕ್ಕ ಪಕ್ಕದ ಗ್ರಾಮಸ್ಥರು, ಸಮಿತಿಯವರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.