ರಾಯಪುರ (ಐಎಎನ್ಎಸ್): ಮತಗಳ ಎಣಿಕೆ ಕಾರ್ಯದ ಕೊನೆಯ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಕಂಡುಬಂದರೂ ಕೊನೆಗೂ ಈ ಕದನದಲ್ಲಿ ಆಡಳಿತಾರೂಢ ಬಿಜೆಪಿಯೇ ಮೇಲುಗೈ ಸಾಧಿಸಿದ್ದು ಮೂರನೆಯ ಬಾರಿಗೂ ಅಧಿಕಾರದ ಗದ್ದುಗೆಗೆ ಏರಿದೆ.
90 ಸ್ಥಾನಗಳ ಛತ್ತೀಸಗಡ ವಿಧಾನಸಭೆಗೆ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿರುವ ಕಮಲ ಪಾಳಯ ಹ್ಯಾಟ್ರಿಕ್ ಜಯ ಸಾಧಿಸಿದ ಸಂತಸದಲ್ಲಿದ್ದರೆ ಅಧಿಕಾರಕ್ಕೆ ಬರಲು ಹೋರಾಟ ನಡೆಸಿದ ಕಾಂಗ್ರೆಸ್ 39 ಸ್ಥಾನ ಗೆದ್ದು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿದೆ.
ಕಳೆದ ಬಾರಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಎಸ್ಪಿ ಈ ಬಾರಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು ಮತ್ತೊಂದು ಸ್ಥಾನ ಬಿಜೆಪಿ ಬಂಡಾಯ ಅಭ್ಯರ್ಥಿಯ ಪಾಲಾಗಿದೆ.
2003 ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಯ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಡಾ. ರಮಣ ಸಿಂಗ್ ಇದೀಗ ಮೂರನೆಯ ಬಾರಿಗೂ ಮುಖ್ಯಮಂತ್ರಿ ಯಾಗುವುದು ಬಹುತೇಕ ಖಚಿತವಾಗಿದೆ.
ರಾಜನಂ ನಂದಗಾವ್ ಕ್ಷೇತ್ರದಲ್ಲಿ ರಮಣ ಸಿಂಗ್ ಕಾಂಗ್ರೆಸ್ನ ಅಲ್ಕಾ ಉದಯ್ ಮದ್ಲಿಯಾರ್ ಅವರನ್ನು ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ.
ಆದರೆ ರಮಣ ಸಿಂಗ್ ಸಂಪುಟದ ಗೃಹ ಸಚಿವ ನನ್ಕರಂ ಕನ್ವಾರ್ ಸೇರಿದಂತೆ ಐವರು ಸಚಿವರು ಸೋಲುಂಡಿದ್ದರೆ ಕಾಂಗ್ರೆಸ್ನ ಹಿರಿಯ ನಾಯಕ ಅಜೀತ್ ಜೋಗಿ ಅವರ ಪುತ್ರ ಅಮಿತ್ ಮಾರ್ವಾದೆಯಲ್ಲಿ ಪತ್ನಿ ಡಾ, ರೇಣು ಜೋಗಿ ಕೋಟಾದಲ್ಲಿ ಗೆಲುವು ಸಾಧಿಸಿದ್ದಾರೆ.
ಬಸ್ತರ್: ಕಾಂಗ್ರೆಸ್ಗೆ ಬಲ
ಮಾವೊವಾದಿಗಳ ಉಪಟಳ, ಕಾನೂನು ಸುವ್ಯವಸ್ಥೆ ನಿಯತ್ರಿಸುವಲ್ಲಿ ರಮಣ ಸಿಂಗ್ ಸರ್ಕಾರ ಎಡವಿರುವ ಅಂಶಗಳು ಬಸ್ತರ್ ಭಾಗದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು ಇಲ್ಲಿ ಕಾಂಗ್ರೆಸ್ ಶಕ್ತಿ ಬಲಗೊಂಡಿದೆ.