ವಿರಾಜಪೇಟೆ: ಜೀವನದಲ್ಲಿ ಗುರಿ ಮುಟ್ಟುವ ಛಲವಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕಾಂತಿ ಬೆಳ್ಳಿಯಪ್ಪ ಅಭಿಪ್ರಾಯಪಟ್ಟರು.
ಇಲ್ಲಿಯ ಕಾವೇರಿ ಕಾಲೇಜಿನ ಎನ್ಎಸ್ಎಸ್ ವತಿಯಿಂದ ಸಮೀಪದ ಕಾಕೋಟುಪರಂಬು ಗ್ರಾಮದ ಮಾದರಿ ಪ್ರಾಥಮಿಕ
ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಶಿಕ್ಷಣದೊಂದಿಗೆ ಯೋಗ, ಧ್ಯಾನ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾಮಾಣಿಕತೆ, ದಕ್ಷತೆ, ಶಿಸ್ತನ್ನು ಪಾಲಿಸಬೇಕು. ಇದರಿಂದ ವಿದ್ಯಾರ್ಥಿಗಳು ಮುಂದೆ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕ ಮೇವಡ ಗಣಪತಿ ಶಿಬಿರ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಲೋಕಜ್ಞಾನವೂ ಇರಬೇಕು ಎಂದರು. ಪ್ರಾಂಶುಪಾಲರಾದ ಡಾ.ಎ.ಎಸ್.ಪೂವಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕಿ ಸ್ವಾತಿ ಬೋಪಣ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಕುಸುಮಾವತಿ ಮಾತನಾಡಿದರು.
ಜಯ ಕರ್ನಾಟಕ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಎಂ.ಬಿ.ಸುಬ್ಬಯ್ಯ, ಎಂ.ಗಣಪತಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಲೋಚನಾ, ನಿವೃತ್ತ ಶಿಕ್ಷಕಿ ಮಂಡೇಟಿರ ಸರಸ್ವತಿ ಸುಬ್ರಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಸಚಿನ್ ಬೋಪಣ್ಣ ಹಾಗೂ ಚಂಬಂಡ ಅಪ್ಪಚ್ಚು ಇದ್ದರು. ಶಿಬಿರಾಧಿಕಾರಿ ಕೆ.ಪಿ.ಗಾಯತ್ರಿ ಸ್ವಾಗತಿಸಿದರು. ಬಿ.ಎಸ್.ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಬಿ.ಯು.ಅಂಬಿಕಾ ವಂದಿಸಿದರು.