ಕೂಡ್ಲಿಗಿಗೆ ಬಂದು ಸೋಮಶೇಖರ ಆರಾಧ್ಯ ಯಾರು ಎಂದರೆ ಜನರು ಉತ್ತರಿಸಲು ತಡವರಿಸುತ್ತಾರೆ. ಅದೇ ಫೋಟೋ ಆರಾಧ್ಯ ಅಂತಾ ಕೇಳಿದರೆ ಅವರ ಮನೆಯನ್ನು ಸಲೀಸಾಗಿ ತೋರಿಸುತ್ತಾರೆ. ಹೀಗೆ ಛಾಯಾಗ್ರಹಣದಿಂದಲೇ ಮನೆ ಮಾತಾಗಿರುವ ಸೋಮಶೇಖರ ಆರಾಧ್ಯ ಅವರ ಮೂರನೆ ಕಣ್ಣಿನ ಕರಾಮತ್ತುಗಳ ಸಂಗ್ರಹ ನಮಗೆ ಮತ್ತೊಂದು ಜಗತ್ತನ್ನು ಅನಾವರಣಗೊಳಿಸುತ್ತದೆ.
ಸೋಮಶೇಖರ ಆರಾಧ್ಯ ಮೂಲತಃ ಕೂಡ್ಲಿಗಿ ತಾಲ್ಲೂಕಿನ ಅಗ್ರಹಾರ ಗ್ರಾಮದವರು. ಆದರೆ, ಜೀವನೋಪಾಯಕ್ಕಾಗಿ ಛಾಯಾ ಗ್ರಹಣವನ್ನು ಆಯ್ದುಕೊಂಡು ನೆಲೆ ನಿಂತಿದ್ದು ಕೂಡ್ಲಿಗಿಯಲ್ಲಿ. ಛಾಯಾಗ್ರಹಣ ಅವರ ಜೀನವೋಪಾ ಯಕ್ಕಾದರೂ ಸಂತಪ್ತಿ ಕಂಡುಕೊಂಡಿದ್ದು ಮಾತ್ರ ಇನ್ನೊಂದು ಮಗ್ಗುಲಿನಲ್ಲಿ. ಆರಾಧ್ಯ ಮನೆಯಿಂದ ಹೊರಬಿದ್ದರೆ ಸಾಕು ಕ್ಯಾಮೆರಾ ಹೆಗಲೇರಿಬಿಡುತ್ತದೆ. ಸುತ್ತಮುತ್ತ ಜರುಗುವ ಪ್ರತಿಯೊಂದು ವಿದ್ಯಮಾ ನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಇವರು ವಿಶೇಷ ಎನ್ನಿಸಿದ್ದರ ಮೇಲೆ ಕ್ಯಾಮೆರಾ ಬೆಳಕು ಚೆಲ್ಲುತ್ತಾ ಸಾಗುತ್ತಾರೆ. ಹೀಗೆ ಇವರು ಸೆರೆ ಹಿಡಿದ ಸಾವಿರಾರು ಛಾಯಾಚಿತ್ರಗಳು ಅತ್ಯಂತ ವಿಶೇಷವಾಗಿದ್ದು, ಗ್ರಾಮೀಣ ಜನಜೀವನ, ಪರಿಸರದ ವಿಸ್ಮಯಗಳು, ಪ್ರಾಣಿ, ಪಕ್ಷಿ ಸಂಕುಲಗಳ ಜೀವನ, ಕಲೆ, ಪ್ರಕತಿಯ ರಮ್ಯತೆ, ಕೃಷಿಕರ ಬದುಕು-ಬವಣೆ, ಹೀಗೆ ವೈವಿಧ್ಯಮಯ ಕೋನಗಳಲ್ಲಿ ಇವರು ಛಾಯಾಗ್ರಹಣ ಮಾಡಿದ್ದಾರೆ.
ಇವರು ಪ್ರತಿ ವಸ್ತು, ಸನ್ನಿವೇಶವನ್ನು ನೋಡುವ ರೀತಿ ಇತರರಿಗಿಂತ ಭಿನ್ನ ಹಾಗೂ ಅದ್ಭುತವಾಗಿದೆ. ತಾನು ಸೆರೆ ಹಿಡಿಯಬೇಕೆಂದು ಕೊಂಡದ್ದನ್ನು ಕ್ಯಾಮೆರಾದಲ್ಲಿ ಕಾಪಿಟ್ಟುಕೊಳ್ಳುವವರೆಗೂ ವಿಶ್ರಮಿ ಸುವುದಿಲ್ಲ!
ಇವರ ಛಾಯಾಚಿತ್ರಗಳನ್ನು ಸವಿಯುತ್ತಾ ಸಾಗಿದಂತೆ ಇವರ ಸೂಕ್ಷ್ಮ ಗ್ರಹಿಕೆ ಹಾಗೂ ಸಂವೇದನಾಶೀಲ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇವರ ಅನೇಕ ಚಿತ್ರಗಳು ರಾಜ್ಯದ ವಿವಿಧ ಕನ್ನಡ, ಇಂಗ್ಲಿಷ್ ಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಸ್ಥಾನ ಪಡೆದಿವೆ. ಆರಾಧ್ಯ ಫೋಟೋ ತೆಗೆದರೆಂದರೆ ಅಲ್ಲೊಂದು ವಿಶೇಷ ಇದ್ದೇ ಇರುತ್ತದೆ ಎಂಬುದು ಸ್ಥಳೀಯರ ಭಾವನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.