ಬೆಂಗಳೂರು: `ಸಹಕಾರ ಭಾರತಿ~ಯ ನಾಲ್ಕನೇ ರಾಷ್ಟ್ರೀಯ ಅಧಿವೇಶನ ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಜನವರಿ 18, 19ರಂದು ನಡೆಯಲಿದೆ.
`ದೇಶದ ಐದು ಸಾವಿರಕ್ಕೂ ಅಧಿಕ ಸಹಕಾರಿಗಳು ಅಧಿವೇಶನದಲ್ಲಿ ಭಾಗವಹಿಸುವರು. ರಾಜ್ಯದ 30 ಸಾವಿರ ಸಹಕಾರ ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಮೊದಲ ದಿನ ಭಾಗವಹಿಸುವರು~ ಎಂದು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಮರಾಠೆ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಅಧಿವೇಶನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ಜೀ ಭಾಗವತ್ ಉದ್ಘಾಟಿಸುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು~ ಎಂದರು.
`ನೇರ ತೆರಿಗೆ ಪದ್ಧತಿಯಲ್ಲಿ ಸಹಕಾರ ಸಂಸ್ಥೆಗಳಿಗೆ ಮಾರಕವಾಗುವ ಪರಿಚ್ಛೇದಗಳನ್ನು ಕೈ ಬಿಡುವಂತೆ ಒತ್ತಾಯಿಸುವುದು. 1997ರ ಸಂವಿಧಾನದ ತಿದ್ದುಪಡಿ ಅನ್ವಯ ವಿವಿಧ ರಾಜ್ಯಗಳ ಸಹಕಾರ ಕಾಯ್ದೆಗಳಿಗೆ ತಿದ್ದುಪಡಿ ನಂತರ ಉದ್ಭವಿಸಬಹುದಾದ ಕಾನೂನು ತೊಡಕುಗಳನ್ನು ಗುರುತಿಸಿ ಪರಿಹಾರಗಳ ಬಗ್ಗೆ ಚಿಂತಿಸಿ ಕ್ರಮ ಕೈಗೊಳ್ಳುವುದು ಅಧಿವೇಶನದ ಉದ್ದೇಶ~ ಎಂದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಧಿವೇಶನದ ಉದ್ದೇಶ~ ಎಂದರು.
ರಾಷ್ಟ್ರೀಯ ಅಧಿವೇಶನದ ಕಾರ್ಯಾಲಯವನ್ನು ಅಪೆಕ್ಸ್ ಬ್ಯಾಂಕಿನ ಮೂರನೇ ಮಹಡಿಯಲ್ಲಿ ಬಿ.ಜೆ.ಪುಟ್ಟಸ್ವಾಮಿ ಶುಕ್ರವಾರ ಉದ್ಘಾಟಿಸಿದರು. ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಗುರುನಾಥ ಜ್ಯಾತೀಂಕರ್ ಉಪಸ್ಥಿತರಿದ್ದರು.