ಮಾನ್ವಿ: ಮೈಸೂರು ಹುಲಿ ಟಿಪ್ಪು ಸುಲ್ತಾನ ಅವರ 264ನೇ ಜನ್ಮ ದಿನಾಚರಣೆಯನ್ನು ಜನವರಿ 4ರಂದು ಮಾನ್ವಿ ಪಟ್ಟಣದಲ್ಲಿ ತಾಲ್ಲೂಕು ಟಿಪ್ಪು ಸುಲ್ತಾನ ಸಂಘದ ವತಿಯಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಘಟಕದ ಸಂಚಾಲಕ ಸೈಯದ್ ಹುಸೇನ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ವತಿಯಿಂದ ಕಳೆದ 15ವರ್ಷಗಳಿಂದ ನಿರಂತರವಾಗಿ ಟಿಪ್ಪು ಸುಲ್ತಾನ ಜಯಂತಿ ಆಚರಿಸಲಾಗುತ್ತಿದೆ. ಈ ವರ್ಷ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ಸರ್ಕಾರದ ವತಿಯಿಂದ ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಟಿಪ್ಪು ಸುಲ್ತಾನ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಖಲೀಲ್ ಖುರೇಷಿ, ಕಾರ್ಯಾಧ್ಯಕ್ಷ ಜಾವೀದ್ ಖಾನ್, ಪದಾಧಿಕಾರಿಗಳಾದ ಲತೀಫ್, ಎಂ.ಕೆ.ಮಹಿಮೂದ್, ರೆಹಮತ್ ಅಲಿ, ಯೂಸುಫ್ ಖುರೇಷಿ, ಅಬ್ರಾರ್ ಖುರೇಷಿ, ಮುಸ್ತಫಾ ಖುರೇಷಿ, ಸೈಯದ್ ಮುಬಾಶಿರ್ ಖಾದ್ರಿ, ರಿಜ್ವಾನ್ ಖುರೇಷಿ, ಮಹಿಬೂಬ್ ಖುರೇಷಿ, ಅಲಂ, ಖಾನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.