ಹುಬ್ಬಳ್ಳಿ: `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ವತಿಯಿಂದ ಜನವರಿ 4ರಿಂದ 6ರವರೆಗೆ ಬೆಂಗಳೂರಿನಲ್ಲಿ 20ನೇ ಅಖಿಲ ಭಾರತ ಕಾರ್ಮಿಕ ಸಮ್ಮೇಳನ ಆಯೋಜಿಸಲಾಗಿದೆ' ಎಂದು ಅಖಿಲ ಭಾರತ ಕಾರ್ಮಿಕ ಸಮಿತಿಯ ರಾಜ್ಯ ಘಟಕದ ಕಾರ್ಯದರ್ಶಿ ಕೆ. ಸೋಮಶೇಖರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ದೇಶದಾದ್ಯಂತ ಅಸಂಘಟಿತ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದ್ದು, ಸೌಲಭ್ಯಗಳಿಲ್ಲದೆ ಅಲ್ಪ ವೇತನದಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ರೂಪಿಸಲು ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಸಮ್ಮೇಳನ ಆಯೋಜಿಸಲಾಗಿದೆ. ಜ.4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು, ಭಾಷಣಕಾರರಾಗಿ ಎಐಯುಟಿಯುಸಿ ಅಧ್ಯಕ್ಷ ಕೃಷ್ಣ ಚಕ್ರವರ್ತಿ, ಉಪಾಧ್ಯಕ್ಷ ಶಂಕರ್ ಸಹಾ, ಪ್ರಧಾನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಪಾಲ್ಗೊಳ್ಳಲಿದ್ದಾರೆ' ಎಂದರು.
`ಜನವರಿ 5 ಮತ್ತು 6ರಂದು ಪ್ರತಿನಿಧಿಗಳ ಅಧಿವೇಶನ ಶಿಕ್ಷಕರ ಸದನದಲ್ಲಿ ನಡೆಯಲಿದ್ದು, ಭಾರತದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸಿರಿಯಾ, ಬಾಂಗ್ಲಾದೇಶ, ಪ್ಯಾಲಸ್ಟೀನ್, ಶ್ರೀಲಂಕಾ, ಕ್ಯೂಬಾ, ಗ್ರೀಸ್ ಮುಂತಾದ ದೇಶಗಳ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ' ಎಂದರು.