ಚಿಕ್ಕನಾಯಕನಹಳ್ಳಿ: ಜಗತ್ತಿನ ಯಾವುದೇ ಭಾಷೆಯಲ್ಲಿರದ ವಿಶೇಷತೆ ಕನ್ನಡ ಭಾಷೆಗಿದೆ ಎಂದು ಸಾಹಿತಿ ಹಿ.ಚಿ.ಶಾಂತವೀರಯ್ಯ ತಿಳಿಸಿದರು.
ಪಟ್ಟಣದ ಇನ್ನರ್ವ್ಹೀಲ್ ಸಂಸ್ಥೆ ಹಾಗೂ ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ಸೋಮವಾರ ನಡೆದ `ಸ್ನೇಹೋತ್ಸವ~ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ `ಅಕ್ಕ~ ಎಂಬ ಪದದ ಜೊತೆಗೆ ಅಕ್ಕಮಹಾದೇವಿಯನ್ನು ನೀಡಿದ ನಮ್ಮ ಕನ್ನಡ ಎಲ್ಲ ಭಾಷೆಗಿಂತಲೂ ಶ್ರೇಷ್ಠತೆ ಪಡೆದಿದೆ ಎಂದರು.
ವಿಶ್ವದ ಎಲ್ಲ ಮಗುವಿನ ಅಳುವ ಭಾಷೆಯ ಮೊದಲ ಅಕ್ಷರ ನಮ್ಮ ಕನ್ನಡದ ವರ್ಣಮಾಲೆಯ `ಅ~ ಕಾರವಾಗಿದೆ. ಅಕ್ಕ-ತಂಗಿ, ಅಣ್ಣ-ತಮ್ಮ ಎಂಬ ಸೋದರತ್ವದಲ್ಲಿ ಹಿರಿಯ ಹಾಗೂ ಕಿರಿಯತನ ಗುರುತಿಸುವ ಒಂದೇ ಶಬ್ಧ ಯಾವುದೇ ಪಾಶ್ಚಿಮಾತ್ಯ ಭಾಷೆಯಲ್ಲಿಲ್ಲ. ಎಲ್ಲ ಭಾಷೆಯ ಲಿಪಿಗೂ ಕನ್ನಡ ಹೊಂದಾಣಿಕೆಯಾಗಲಿದೆ ಎಂದರು.
ಮೈಸೂರಿನ ರಂಗಾಯಣ ಕಲಾವಿದೆ ಗೀತಾ ಮಾಂಡೇಡ್ಕರ್ ಮಿಮಿಕ್ರಿ, ಹಾಸ್ಯ, ಜನಪದ ಗೀತೆ ಹಾಡಿ ರಂಜಿಸಿದರು. ಮೈಸೂರಿನ ಶಕುಂತಲಾ ಚಿಂತನ -ಮಂಥನ ನಡೆಸಿಕೊಟ್ಟರು. ಪುರಸಭೆ ಅಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ವಿ.ನಾಗರಾಜರಾವ್, ಇನ್ನರ್ವ್ಹೀಲ್ ಸಂಸ್ಥೆ ಅಧ್ಯಕ್ಷೆ ಭವಾನಿ ಜಯರಾಂ, ಕಾರ್ಯದರ್ಶಿ ತೇಜಾವತಿ ನರೇಂದ್ರಬಾಬು, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ನಟರಾಜು, ಕಾರ್ಯದರ್ಶಿ ಕವಿತಾ ಚನ್ನಬಸವಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ತಾಲ್ಲೂಕು ಸಂಘದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಜಶೇಖರ್ ಮಾತನಾಡಿದರು. ಪುಷ್ಪಾ ವಾಸುದೇವ್ ನಿರೂಪಿಸಿದರು.