ಚಿಕ್ಕಜಾಜೂರು: ಬಿ. ದುರ್ಗದಲ್ಲಿ ಗುರುವಾರ ನಡೆದ ಹಜರತ್ ಸೈಯ್ಯದ್ ಷಾ ಅಬ್ದುಲ್ಲಾ ಷಾ ಖಾದ್ರಿ ಅವರ 234ನೇ ಉರುಸ್ನ ಅಂಗವಾಗಿ ಏರ್ಪಡಿಸಿದ್ದ ಕವ್ವಾಲಿ ಕಾರ್ಯಕ್ರಮ ಜನಮನ ಸೆಳೆಯಿತು.
ದಾವಣಗೆರೆಯ ಅಜೀಜ್ ಸನಾಬಾಬು ಹಾಗೂ ಸಂಗಡಿಗರು ಮತ್ತು ಮುಂಬೈನ ಅಜೀಮ್ ನಾಜಾಂ ಮತ್ತು ತಂಡದವರು ಕವ್ವಾಲಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಖವ್ವಾಲಿ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಆಗಮಿಸಿದ್ದರು. ರಾತ್ರಿ 11ಕ್ಕೆ ಆರಂಭವಾದ ಕಾರ್ಯಕ್ರಮ ಮುಂಜಾನೆ 5ರವರೆಗೂ ನಡೆಯಿತು.
ಮುಂಜಾನೆಯಿಂದಲೇ ಹಿಂದೂ- ಮುಸ್ಲಿಮರು ದರ್ಗಾಕ್ಕೆ ಮಕ್ಕಳ ಜತೆ ಆಗಮಿಸಿ, ಭಕ್ತಿಯಿಂದ ಸಕ್ಕರೆ ಒತ್ತಿಸುವಲ್ಲಿ ನಿರತರಾಗಿದ್ದರು.
ಕಳೆದ ಹಲವಾರು ವರ್ಷಗಳಿಂದ ಟಿಪ್ಪು ಸುಲ್ತಾನ್ ಕುರಿತು ಕವ್ವಾಲಿ ಹಾಡುತ್ತಾ ಬಂದಿರುವ ಮುಂಬೈನ ಅಜೀಮ್ ನಾಜಾಂ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ, ದರ್ಗಾ ಸಮಿತಿಯವರು ಎಸ್.ಡಿ. ರಾಮಸ್ವಾಮಿ, ನರಸಿಂಹಪ್ಪ, ಜೈ ಕರ್ನಾಟಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಯಾಜ್ ಬಾಬು, ಟಿಪ್ಪು ಸುಲ್ತಾನ್ ವೇದಿಕೆಯ ಅಧ್ಯಕ್ಷ ಟಿಪ್ಪು ಕಾಸಿಂ ಅಲಿ, ರೈತ ಸಂಘದ ಮುಖಂಡ ಜಯ್ಯಣ್ಣ, ಜಿಲ್ಲಾ ವಕ್ಫ್ ಅಧ್ಯಕ್ಷ ಸಾಧಿಕ್ ಮೊದಲಾದವರನ್ನು ಸನ್ಮಾನಿಸಿದರು.
ಕೆಲವು ಕಿಡಿಗೇಡಿಗಳು ಗಲಾಟೆಗೆ ಮುಂದಾದರು. ಪೊಲೀಸರ ಸಮಯಪ್ರಜ್ಞೆಯಿಂದ ಗಲಾಟೆ ತಪ್ಪಿತು. ರಸ್ತೆ ಬದಿಯ ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.