ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿಗೆ ಮಾಹಿತಿ ನೀಡಿ ಸಹಕರಿಸಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 9ರಿಂದ 28ರವರೆಗೆ ನಡೆಯುವ 2011ರ ಜನಗಣತಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ರಾಜ್ಯ ಜನಗಣತಿಯ ನೋಡಲ್ ಅಧಿಕಾರಿಯೂ ಆದ ಕಂದಾಯ ಇಲಾಖೆ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್ ಮತ್ತು ಜನಗಣತಿ ನಿರ್ದೇಶಕ ಟಿ.ಕೆ.ಅನಿಲ್‌ಕುಮಾರ್ ಕೋರಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಏಳನೇ ಜನಗಣತಿ ಇದಾಗಿದ್ದು, ಮನೆ ಗಣತಿ ನಂತರ ಜನಗಣತಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ದಿನಗಳ ಕಾಲ ನಡೆಯುವ ಜನಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಗಣತಿದಾರರು ಮನೆಗೆ ಬಂದಾಗ ಅವರು ಕೇಳುವ 29 ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಅವರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮುಗಿದಿರುವ ಮನೆ ಗಣತಿಯ ಮಾಹಿತಿಯನ್ನು ಸದ್ಯದಲ್ಲೇ ಪ್ರಕಟಿಸಲಾಗವುದು. ಜನಗಣತಿಯ ತಾತ್ಕಾಲಿಕ ಪಟ್ಟಿಯನ್ನು ಮಾರ್ಚ್ ಕೊನೆ ವಾರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಚಟುವಟಿಕೆ ಎಂದು ಹೇಳಲಾದ ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ರಾಜ್ಯದ 176 ತಾಲ್ಲೂಕು, 220 ಪಟ್ಟಣ, 127 ಜನಗಣತಿ ಪಟ್ಟಣ, 22 ನಗರ ಸಮೂಹಗಳು, 29,340 ಗ್ರಾಮಗಳಲ್ಲಿ ಜನಗಣತಿ ನಡೆಸಲಾಗುತ್ತದೆ. ಇವುಗಳನ್ನು 1,26,519 ಜನಸಂಖ್ಯಾ ಗಣತಿ ಬ್ಲಾಕುಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 1,03,523 ಮಂದಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. 17,254 ಮಂದಿ ಮೇಲ್ವಿಚಾರಕರು ಮತ್ತು 2,297 ಮಂದಿ ಪರಿಣತರಾದ ತರಬೇತುದಾರರು ನೋಡಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ವಸತಿ ರಹಿತರ ಗಣತಿ: ಜನಗಣತಿ ಮುಗಿದ ನಂತರ ಅಂದರೆ, ಫೆ.28ರ ರಾತ್ರಿ ವಸತಿ ರಹಿತರ ಗಣತಿಯನ್ನು ಮಾಡಲಾಗುವುದು. ಇದರ ನಂತರ ಮಾರ್ಚ್ 1ರಿಂದ 5ರವರೆಗೆ ಪುನರ್ ಸಂದರ್ಶನ ಸುತ್ತನ್ನು ಕೈಗೊಳ್ಳಲಾಗುವುದು. ಇದರ ನಡುವೆ ಅಲ್ಲಲ್ಲಿ ತಪಾಸಣೆ ಮಾಡಲಾಗುತ್ತದೆ. ಮಾಹಿತಿ ದೋಷ ಇದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅನಿಲ್‌ಕುಮಾರ್ ಹೇಳಿದರು.

ಪ್ರತಿಯೊಂದು ಅರ್ಜಿಗೂ ಬಾರ್‌ಕೋಡ್ ನೀಡಿದ್ದು, ಅದರಿಂದ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಸುತ್ತಿರುವುದರಿಂದ ಜನಗಣತಿಯ ಮಾಹಿತಿಯನ್ನು ಮನೆ ಗಣತಿ ಜತೆಗೆ ಸೇರಿಸಬಹುದಾಗಿದೆ. ಎಲ್ಲ ಪಟ್ಟಣಗಳಲ್ಲಿನ ಕೊಳೆಗೇರಿ ಪ್ರದೇಶಗಳಿಗೆ ಪ್ರತ್ಯೇಕವಾದ ಗಣತಿ ಬ್ಲಾಕುಗಳನ್ನು ರಚಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಗಣತಿ ಬ್ಲಾಕ್‌ಗಳಿಗೆ ಜಿ.ಐ.ಎಸ್ ಆಧಾರಿತ ನಕ್ಷೆಗಳನ್ನು ನೀಡಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಿಗೆ ಗ್ರಾಮದ ನಕ್ಷೆಗಳನ್ನು ನೀಡಲಾಗಿದೆ.

ಇದೇ ಮೊದಲ ಬಾರಿಗೆ ಸ್ತ್ರೀ-ಪುರುಷ ಲಿಂಗಗಳ ಜತೆಗೆ ಮೂರನೆ ಲಿಂಗವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಅನಿಲ್‌ಕುಮಾರ್ ಹೇಳಿದರು.
ಗೋಪ್ಯ: ಜನಗಣತಿ ಸಂದರ್ಭದಲ್ಲಿ ನೀಡುವ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು. ಅಂಕಿಸಂಖ್ಯೆಗಳನ್ನು ಮಾತ್ರ ತೆಗೆದುಕೊಂಡು, ಉಳಿದ ವೈಯಕ್ತಿಕ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.

ಮಾಹಿತಿ ಸಂಗ್ರಹಿಸುವ ಕೆಲಸವನ್ನು ಈ ಸಲವೂ ಹೆಚ್ಚಾಗಿ ಶಿಕ್ಷಕರೇ ಮಾಡಲಿದ್ದಾರೆ. ಅರ್ಧ ದಿನ ಜನಗಣತಿ, ಉಳಿದ ಅರ್ಧ ದಿನ ಶಾಲೆಗಳಿಗೆ ಹೋಗಲು ಸೂಚಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.

ಸಹಾಯವಾಣಿ: ಜನಗಣತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಶುಲ್ಕ ರಹಿತ ಸಹಾಯವಾಣಿ ಸ್ಥಾಪಿಸಲಾಗಿದೆ. ಅದರ ಸಂಖ್ಯೆ 1800 345 011. ವೆಬ್‌ಸೈಟ್ ವಿಳಾಸ-  www.censuskarnataka.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT