ಮೈಸೂರು: ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲೆಪ್ಮೆಂಟ್ (ವಿ-ಲೀಡ್) ವತಿಯಿಂದ ಪ್ರಜಾಪ್ರಭುತ್ವ ಸಬಲೀಕರಣ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜನಜಾಗೃತಿ ರಥ, ಬೀದಿ ನಾಟಕ ಹಾಗೂ ಭಿತ್ತಿಪತ್ರಗಳ ಹಂಚಿಕೆ ಅಭಿಯಾನಕ್ಕೆ ಪತ್ರಕರ್ತ ಕೃಷ್ಣವಟ್ಟಂ ಚಾಲನೆ ನೀಡಿದರು.
`ನಾನು ನನ್ನ ಜೀವನದಲ್ಲಿ ಪಾರದರ್ಶಕವಾಗಿರುತ್ತೇನೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ ಉತ್ತರದಾಯಿ ಆಗಿರುತ್ತೇನೆ ಹಾಗೂ ನನ್ನ ಜವಾಬ್ದಾರಿಗಳಲ್ಲಿ ಭಾಗವಹಿಸು ತ್ತೇನೆ', `ನಾನು ನನ್ನ ಮಗುವಿನ ಭವಿಷ್ಯಕ್ಕಾಗಿ ಮತ ಚಲಾಯಿಸಲು ಹೋಗು ತ್ತಿದ್ದೇನೆ' ಎಂಬ ಭಿತ್ತಿಪತ್ರ ಗಳನ್ನು ಸಾರ್ವಜನಿಕರಿಗೆ ವಿತರಿಸ ಲಾಯಿತು.
ಮೈಸೂರಿನಿಂದ ಹೊರಟಿರುವ ಜಾಥಾ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು ಗ್ರಾಮೀಣ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.
ಬಳಿಕ ಮಾತನಾಡಿದ ಕೃಷ್ಣವಟ್ಟಂ, `ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ವಾಸಿಗಳಿಗೇ ಮತದಾನದ ಅರಿವು ಮೂಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗ್ರಾಮೀಣರಲ್ಲಿ ಮತದಾನದ ಬಗ್ಗೆ ಅರಿವು ಇರಲಿಲ್ಲ. ಆದರೆ, ಇಂದು ಹಳ್ಳಿ ಜನರೇ ನಗರವಾಸಿಗಳಿಗೆ ಮತದಾನದ ಮಹತ್ವ ತಿಳಿಸುವಂತಾಗಿದೆ.
ಹಿಂದೆ ಜಾತಿ ಆಧಾರಿತ ಮತದಾನವಿರಲಿಲ್ಲ. ಆದರೆ, ಇಂದು ನೂರಾರು ಜಾತಿಗಳು ಹುಟ್ಟಿಕೊಂಡಿದ್ದು, ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿವೆ, ಹೀಗಾಗಬಾರದು' ಎಂದು ಹೇಳಿದರು.
ವಿ-ಲೀಡ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ವಸಂತ ಕುಮಾರ್ ಮೈಸೂರುಮಠ ಇದ್ದರು.