ಗೋಣಿಕೊಪ್ಪಲು: ಸ್ವಜನ ಪಕ್ಷಪಾತ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಅಡಳಿತಾರೂಢ ಬಿಜೆಪಿ ಜನತಂತ್ರ ವ್ಯವಸ್ಥೆಗೆ ಮಸಿಬಳಿದಿದೆ. ಜನತಂತ್ರ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಸಂಸದ ವಿಶ್ವನಾಥ್ ಹೇಳಿದರು.
ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಜಿ.ಪಂ. ಮತ್ತು ತಾ.ಪಂ.ಗಳಲ್ಲಿ ವಿಜೇತ ಜನಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣೆ ವ್ಯವಸ್ಥೆ ತಲೆ ತಗ್ಗಿಸುವಂತಿದೆ. ಮರ್ಯಾದೆ ಉಳ್ಳವರು ಚುನಾವಣೆ ನಿಲ್ಲಲೇ ಬಾರದು ಎಂಬ ಭಾವನೆ ಮೂಡುವಂತಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿಯ ದುರಾಡಳಿತ ಎಂದು ದೂರಿದರು.
ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜಯಪಡೆಯಲು ಸಾಧ್ಯವಾಗಲಿಲ್ಲ. ಇದೀಗ ತೆರವಾಗಿರುವ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರನ್ನು ಆರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಒತ್ತುನೀಡಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಅರುಣ್ ಮಾಚಯ್ಯ, ಮುಖಂಡರ ನಡುವಿನ ವೈಮನಸ್ಸು ಪಕ್ಷದ ಹಿನ್ನಡೆಗೆ ಕಾರಣವಾಯಿತು. ಮುಂದೆಯಾದರೂ ಪಕ್ಷದ ಹಿತದೃಷ್ಟಿಯಿಂದ ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಜೆ.ಎ.ಕರುಂಬಯ್ಯ ಮಾತನಾಡಿ, ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿದುದೇ ಪಕ್ಷದ ಅವನತಿಗೆ ಕಾರಣ. ಮುಖಂಡರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಲ್ಲಿ ವಿಫಲರಾದರು ಎಂದು ಬೇಸರದಿಂದ ನುಡಿದರು.
ನಾಪೋಕ್ಲು ತಾ.ಪಂ.ಸದಸ್ಯ ನೆರವಂಡ ಉಮೇಶ್, ಜಿ.ಪಂ.ಸದಸ್ಯರಾದ ಸಿದ್ದಾಪುರದ ಎಂ.ಎಸ್.ವೆಂಕಟೇಶ್, ಗೋಣಿಕೊಪ್ಪಲಿನ ಸರಿತಾ ಪೂಣಚ್ಚ, ಪೊನ್ನಂಪೇಟೆಯ ಎಂ.ಎಸ್ ಕುಶಾಲಪ್ಪ, ಕಾರ್ಯಕರ್ತ ಪಿ.ಕೆ.ಪ್ರವೀಣ್ ಮಾತನಾಡಿದರು.
ಗೋಣಿಕೊಪ್ಪಲು ನಗರ ಕಾಂಗ್ರೆಸ್ ಅಧ್ಯಕ್ಷ ಕೊಪ್ಪಿರ ಸನ್ನಿ ಸೋಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಮಾಚಯ್ಯ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವಿ.ಕೆ.ಪೋಕುಟ್ಟಿ, ಕೆಪಿಸಿಸಿ ಸದಸ್ಯೆ ಪದ್ಮಿನಿ ಪೊನ್ನಪ್ಪ ಹಾಜರಿದ್ದರು. ಕುಪ್ಪಂಡ ಗಣೇಶ್ ಸ್ವಾಗತಿಸಿದರು. ವಿ.ಟಿ.ವಾಸು, ಅಬ್ದುಲ್ ಸಮ್ಮದ್ ನಿರೂಪಿಸಿದರು. ಅಬ್ದುಲ್ ಜಲೀಲ್ ವಂದಿಸಿದರು.
ತಾ.ಪಂ. ಮತ್ತು ಜಿ.ಪಂ.ಗಳಲ್ಲಿ ವಿಜೇತರಾದ ಪಕ್ಷದ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.