ಚನ್ನಮ್ಮನ ಕಿತ್ತೂರು: ‘ಸರ್ಕಾರದ ವಿವಿಧ ವಸತಿ ಯೋಜನೆಯಡಿ ಕಡುಬಡವರು ನಿರ್ಮಿಸಿಕೊಳ್ಳುವ ಮನೆಗಳಿಗೆ ಮಂಜೂರಾತಿ ನೀಡಲು ಸ್ಥಳೀಯ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ರೂ 10000ರ ವರೆಗೆ ದುಡ್ಡು ಪಡೆಯುತ್ತಿದ್ದಾರೆ’ ಎಂದು ಇಲ್ಲಿಯ ಗುರುವಾರ ಪೇಟೆಯ ನೂರಾನಿ ಓಣಿಯ ಮುಸ್ಲಿಮ್ ಮಹಿಳೆಯರು ಗಂಭೀರ ಆರೋಪ ಮಾಡಿದ್ದಾರೆ.
‘ಸೋಮವಾರ ಪೇಟೆಯ ಉರ್ದು ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾನುವಾರ ಬಂದಿದ್ದ ಶಾಸಕ ಡಿ.ಬಿ. ಇನಾಮದಾರ ಗಮನಕ್ಕೆ ಇದನ್ನು ತರಲು ಬಂದಿದ್ದೆವು. ಆದರೆ ಕೆಲವರು ನಮಗೆ ಶಾಸಕರನ್ನು ಭೇಟಿಯಾಗಲು ಬಿಡಲಿಲ್ಲ, ವಾಹನ ಹತ್ತಿಸಿ ಅವರನ್ನು ಕಳಿಸಿದರು’ ಎಂದು ಅವರು ದೂರಿದರು.
‘ಬಡವರಿಗೆ ಸರಿಯಾಗಿ ಮನೆ ಹಂಚಿಕೆಯಾಗುತ್ತಿಲ್ಲ. ಬಿಪಿಎಲ್ ಕಾರ್ಡುಗಳು ದುಡ್ಡಿದ್ದವರ ಪಾಲಾಗುತ್ತಿವೆ. ಬಡವರ ಗೋಳು ಯಾರೂ ಕೇಳದಂತಾಗಿದೆ’ ಎಂದು ಅಳಲು ತೋಡಿಕೊಂಡರು.
‘ಚುನಾವಣೆ ಸಂದರ್ಭದಲ್ಲಿ ‘ಇಲ್ಲಿ ಹಾಕಿ, ಅಲ್ಲಿ ಹಾಕಿ’ ಎಂದು ಇಲ್ಲಿಯ ಮುಖಂಡರು ವೋಟು ಹಾಕಿಸಿಕೊಂಡರು. ಈಗ ನೋಡಿದರೆ ಅದೇ ಬಡವರ ಮನೆ ಮಂಜೂರಿಗೆ 10ಸಾವಿರ ಲಂಚ ನೀಡಬೇಕಾಗಿ ಬಂದಿದೆ. ವೋಟು ನೀಡಿದ ಶಾಸಕರಿಗೆ ಹೇಳಲು ಬಂದರೆ ಇಲ್ಲಿಯ ಕೆಲ ಮುಖಂಡರು ಅಡ್ಡಿ ಪಡಿಸಿರುವುದು ಸರಿಯೇ’ ಎಂದು ಮಹಿಳೆಯರು ಪುನರುಚ್ಛರಿಸಿದರು.
‘ಪಂಚಾಯಿತಿ ವ್ಯವಸ್ಥೆ ಮೂಲಕ ಆಯ್ಕೆ ಮಾಡುವ ಅರ್ಹ ಫಲಾನುಭವಿಗಳಿಂದ ದುಡ್ಡು ಪಡೆಯದಂತೆ ಶಾಸಕರೇ ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕು’ ಎಂದು ಬಿಯಾಮ್ ಅಮಲಜರಿ, ಫಾತಿಮಾ ಕುಕಡೊಳ್ಳಿ ಮತ್ತಿತರರು ಒತ್ತಾಯಿಸಿದರು.