ಹುಬ್ಬಳ್ಳಿ: ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಬಡವರಿಗೆ `ಜನತಾ ಸೀರೆ-ಧೋತಿ~ ವಿತರಣೆ ಯೋಜನೆಯನ್ನು ಮತ್ತೆ ಜಾರಿಗೊಳಿಸಿ, ನಷ್ಟದಲ್ಲಿರುವ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಉಳಿಸಲು ತಮಿಳುನಾಡು ಮಾದರಿಯಲ್ಲಿ ಆರ್ಥಿಕ ನೆರವು ನೀಡಬೇಕು ಎಂದು ನಿಗಮ ಸರ್ಕಾರವನ್ನು ಕೋರಿದೆ.
ಈ ಬಗ್ಗೆ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಕ್ರಿಯಾ ಯೋಜನೆ ರೂಪಿಸಿದ್ದು, ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರಕ್ಕೆ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾಾಯಣ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 26,000ದಷ್ಟು ಇದ್ದ ಕೈ ಮಗ್ಗ ನೇಕಾರರ ಸಂಖ್ಯೆ ಒಂದು ದಶಕದ ಅವಧಿಯಲ್ಲಿ 8,000ಕ್ಕೆ ಕುಸಿದಿದೆ. ನಿಗಮ ಪ್ರಸಕ್ತ ವರ್ಷ 9.9 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.