ನೆಲಮಂಗಲ: ನಮ್ಮ ಸಂಸ್ಕೃತಿಯ ಪ್ರತೀಕವಾದ ಜನಪದ ಕಲೆ, ಸಾಹಿತ್ಯ ಹಾಗೂ ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿವೆ. ಅವುಗಳ ಮೂಲ ಪ್ರಕಾರಗಳನ್ನು ಪರಿಚಯಿಸುವ ಕಾರ್ಯ ಸಂಘ- ಸಂಸ್ಥೆಗಳಿಂದ ನಡೆಯಬೇಕು ಎಂದು ಕಲಾವಿದ ಡಾ.ಬಾನಂದೂರು ಕೆಂಪಯ್ಯ ಹೇಳಿದರು.
ಸ್ಥಳೀಯ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶ್ಯಾಕಲದೇವನಪುರದ ಜನಪದ ಕಲಾವಿದ ವಿ.ರಾಮಚಂದ್ರ ಅವರು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಹತ್ತು ದಿನಗಳ ಜನಪದ ಸಂಗೀತ ಮತ್ತು ನೃತ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮತನಾಡಿದರು.
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಜನಪದ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್.ಪರಡ್ಡಿ, ಜನವಾಹಿನಿಯಾದ ಜನಪದವನ್ನು ಶಾಲಾ- ಕಾಲೇಜುಗಳ ಮುಖ್ಯಸ್ಥರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಅಂಗವಿಕಲ ಅಧಿನಿಯಮದ ನಿವೃತ್ತ ಆಯುಕ್ತ ಎಲ್.ಕೃಷ್ಣಮೂರ್ತಿ, ಉಪ ಪ್ರಾಂಶುಪಾಲ ಟಿ.ವೆಂಕಟೇಶ್, ಯಂಟಗಾನಹಳ್ಳಿ ಕಾಲೇಜಿನ ಉಪನ್ಯಾಸಕ ಬಿ.ಮಧುಸೂಧನ್, ಡಿಎಸ್ಎಸ್ ಮುಖಂಡ ವಕೀಲ ಆರ್.ಸಿ.ರಾಮಲಿಂಗಯ್ಯ ವೇದಿಕೆಯಲ್ಲಿದ್ದರು. ಶಿಬಿರದ ಸಂಚಾಲಕ ಅಪ್ಪಸಾಹೇಬ್ ಗಾಣಿಗೇರ್ ಶಿಬಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಎಸ್. ಬಿ.ಹನುಮಂತರಾಯಪ್ಪ, ಸುಕನ್ಯ, ವಿಜಯಕುಮಾರ್, ಯು.ಪಿ. ಸೋನಿಯ, ವೇಂಕಟೇಶ್ ಆರ್. ಚೌಥಾಯಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.