ತುಮಕೂರು: ಜನಪದ ಕವಿಗಳು ಮಕ್ಕಳೊಂದಿಗೆ ಕರುಳು ಬಳ್ಳಿಯ ಸಂಬಂಧ ಹೊಂದಿದ್ದರು. ತಾಯಿ- ಮಕ್ಕಳ ನವಿರು ಸಂಬಂಧದ ಬಗ್ಗೆ ಅನೇಕ ಉತ್ತಮ ಜನಪದ ಕವಿತೆಗಳು ಸಂಗ್ರಹವಾಗಿವೆ ಎಂದು ಶಿಶು ಸಾಹಿತಿ ಸುಶೀಲಾ ಸದಾಶಿವಯ್ಯ ಹೇಳಿದರು.
ಸಿದ್ದಗಂಗೆಯಲ್ಲಿ ಕಣ್ಮುಚ್ಚಾಲೆ ಮಕ್ಕಳ ಗುಂಪು ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧದ ದೊಡ್ಡತನ ಜನಪದದಲ್ಲಿ ಗೋಚರವಾಗುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಹಾಸ್ಯ ಸಾಹಿತಿ ಗೌಡನಕಟ್ಟೆ ತಿಮ್ಮಯ್ಯ, ಕ್ಷೇತ್ರದ ಕುರಿತು ಕವನ ವಾಚಿಸಿದ ಮಕ್ಕಳು ತಮ್ಮ ಭಾವನೆಗಳನ್ನು ಕವಿತೆ ಮೂಲಕ ಹಂಚಿಕೊಳ್ಳಲು ಯತ್ನಿಸಿದ್ದಾರೆ ಎಂದರು.
ಚಿಕ್ಕತೊಟ್ಲುಕೆರೆ ಅಟವಿ ಜಂಗಮ ಕ್ಷೇತ್ರದ ಪ್ರೊ.ಶಂಕರಗೌಡ ಮ.ಬಿರಾದಾರ, ವಸ್ತು ಪ್ರದರ್ಶನ ಕಾರ್ಯಕಾರಿ ಸಮಿತಿ ಜಂಟಿ ಕಾರ್ಯದರ್ಶಿ ಕಂ.ಬ.ರೇಣುಕಯ್ಯ, ವಕೀಲ ಸಾ.ಚಿ.ರಾಜಕುಮಾರ್, ಶಿಶು ಸಾಹಿತಿ ಸಿದ್ದರಾಜ್ ಐವಾರ್ ಮಾತನಾಡಿದರು. ಕಣ್ಮುಚ್ಚಾಲೆ ಮಕ್ಕಳ ಗುಂಪಿನ ಅಧ್ಯಕ್ಷೆ ರೇಣುಕಾ ಪರಮೇಶ್ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು.