ಹಿರಿಯೂರು: ಸರ್ಕಾರ ಮತ್ತು ರಾಜಕಾರಣಿಗಳು ಕ್ರಿಯಾಶೀಲರಾಗಿ, ಸೃಜನಶೀಲರಾಗಿ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಾಹಿತಿ ಚಂದ್ರಶೇಖರ ತಾಳ್ಯ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ರಾಜಕಾರಣಿಗಳಿಗೆ ಎಸ್. ನಿಜಲಿಂಗಪ್ಪ, ಕೆ. ಕೆಂಚಪ್ಪ ಅವರಿಗೆ ಇದ್ದ ಬದ್ಧತೆ ಬೇಕು. ಜಾತಿ ಮೀರಿದ ರಾಜಕಾರಣ ಬೇಕಿದೆ. ವಿದೇಶಿ ಮಹಿಳೆಯರಿಗೆ ಹೋಲಿಸಿದರೆ ಭಾರತೀಯ ಮಹಿಳೆಯರ ಸ್ಥಿತಿ ಆಶಾದಾಯಕವಾಗಿದೆ. ಹಲವು ಸಮಸ್ಯೆಗಳ ಒಳಸುಳಿಯಲ್ಲಿಯೂ ಆನಂದ ಅನುಭವಿಸುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಮಗೆ ಎದುರಾಗುವ ಸಮಸ್ಯೆಗಳ ವಿರುದ್ಧ ಗಟ್ಟಿಯಾಗಿ ನಿಲ್ಲುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿಜ್ಞಾನ ವಿಷಯ ಓದುವವರು ಕೇವಲ ಎಂಜಿನಿಯರ್, ವೈದ್ಯರಾಗಬೇಕೆಂದು ಆಶಿಸುವ ಬದಲು ವಿಜ್ಞಾನಿಗಳಾಗುವ ಬಗ್ಗೆಯೂ ಯೋಚಿಸಬೇಕು. ವಿಶಾಲ ಜಗತ್ತಿನ ಅಂತರಂಗದ ಸೌಂದರ್ಯವನ್ನು ಅರಿಯುವ ಶಕ್ತಿ ವಿಜ್ಞಾನಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ಸುಧಾಕರ್ ಮಾತನಾಡಿ, ತಾವು ಶಾಸಕರಾದ ನಂತರ ತಾಲ್ಲೂಕಿಗೆ ತೋಟಗಾರಿಕೆ ಕಾಲೇಜು, ಐಟಿಐ ಕಾಲೇಜು, ಏಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಇವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು. ನಿರಂತರವಾಗಿ ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಯಳನಾಡು ಅಂಜನಪ್ಪ, ಪುರಸಭಾ ಸದಸ್ಯ ಜಿ. ಧನಂಜಯಕುಮಾರ್, ಪ್ರಾಂಶುಪಾಲ ಬಿ. ಚಿಕ್ಕಪ್ಪ, ಬಿಇಒ ಎಂ. ರೇವಣಸಿದ್ದಪ್ಪ ಹಾಜರಿದ್ದರು.
ಉಪನ್ಯಾಸಕ ರಂಗಪ್ಪ ಸ್ವಾಗತಿಸಿದರು. ಹರಿಯಣ್ಣ ವಂದಿಸಿದರು. ಟಿ.ಆರ್. ರೇವಣಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.