ಅರಸೀಕೆರೆ: ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಂದರ್ಭದಲ್ಲಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಗ್ರಾಮಸ್ಥರಿಗೆ ಈಚೆಗೆ ಸಲಹೆ ನೀಡಿದರು.
ತಾಲ್ಲೂಕಿನ ಎಂ.ಜಿ ಹಟ್ಟಿ, ಹೊಳಲ್ಕೆರೆ ಗ್ರಾಮಗಳ ಪರಿಶಿಷ್ಟರ ಕಾಲೊನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಡಾಂಬರೀಕರಣ ಮತ್ತು ಹರಳಕಟ್ಟ ಗ್ರಾಮದ ಉಪ್ಪಾರರ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈಚೆಗೆ ಗ್ರಾಮಗಳಲ್ಲಿ ಅಭಿವೃದ್ಧಿಗಿಂತ ರಾಜಕೀಯಕ್ಕೆ ಒತ್ತು ನೀಡಲಾಗುತ್ತಿದೆ. ಜನಪ್ರತಿನಿಧಿಗಳು ರಾಜಕೀಯ ಬದಿಗಿಡಬೇಕು. ಜನಪರ ಕೆಲಸಗಳ ಕಡೆ ಗಮನ ಹರಿಸಿದರೆ ಹಳ್ಳಿಗಳು ಪ್ರಗತಿಯಾಲಿವೆ ಎಂದರು.
ಗ್ರಾಮದ ಮುಖಂಡ ಎಚ್.ಜಿ. ಶಿವಮೂರ್ತಪ್ಪ ಮಾತನಾಡಿ, ತಾಲ್ಲೂಕಿನ ಅನಾವೃಷ್ಟಿ ಗಮನಿಸಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಅರಸೀಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂಬ ಘೋಷಣೆಗೆ ಮಾಡಲು ಒತ್ತಡ ಹಾಕಿದ್ದಾರೆ. ಇದಕ್ಕೆ ಶಾಸಕರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ನಂಜುಂಡಪ್ಪ, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಡಿ.ಎಂ. ಕುರ್ಕೆ ಗ್ರಾ.ಪಂ. ಅಧ್ಯಕ್ಷ ಡಿ.ಕೆ ದಯಾನಂದ, ಗ್ರಾ.ಪಂ. ಸದಸ್ಯರಾದ ಶಶಿಧರ್, ಯಲ್ಲಮ್ಮ, ಗ್ರಾಮದ ಮುಖಂಡ ಎಚ್.ಎಸ್ ಷಡಕ್ಷರಿ, ಕೆ. ಶಂಕರನಹಳ್ಳಿ ಗ್ರಾ.ಪಂ. ಸದಸ್ಯರಾದ ಪಿ.ಕೆ. ಮೈಲಾರಪ್ಪ, ಮಹೇಶ್ ಉಪಸ್ಥಿತರಿದ್ದರು.