ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಭಾಷೆ ಮೊಳಗಬೇಕು

Last Updated 4 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ


ಬೆಂಗಳೂರು:  ಪ್ರಜಾಪ್ರಭುತ್ವಲ್ಲಿ ‘ಜನಭಾಷೆ’ ಮೊಳಗಬೇಕು. ಅದಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಮುಖ್ಯ. ಆ ನಿಟ್ಟಿನಲ್ಲಿ ನಮ್ಮ ಜನನಾಯಕರು ಒತ್ತಡ ತರಬೇಕು ಎಂದು ಲೇಖಕ ಡಾ.ಪಿ.ವಿ.ನಾರಾಯಣ ಬಲವಾಗಿ ಪ್ರತಿಪಾದಿಸಿದರು.

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚೊಚ್ಚಲ ಗೋಷ್ಠಿಯಲ್ಲಿ ‘ಕನ್ನಡ ಸಮುದಾಯದ ಆತಂಕಗಳು’ ವಿಚಾರವಾಗಿ ಅವರು ಆಶಯ ಭಾಷಣ ಮಾಡಿದರು. ಕನ್ನಡ ಸಮುದಾಯದ ತವಕ-ತಲ್ಲಣಗಳನ್ನು ಕನ್ನಡ, ನಾಡು, ಜನಪದ ಈ ಮೂರು ನೆಲೆಗಳಲ್ಲಿ ಅವರು ವಿಶ್ಲೇಷಣೆ ಮಾಡಿದರು. ಕನ್ನಡ ಎಂಬುದು ಮುಪ್ಪುರಿಗೊಂಡ ಪರಿಕಲ್ಪನೆ ಎಂದರು.

ನಮ್ಮಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಜಾಸ್ತಿಯಾಗುತ್ತಿವೆ. ಅವುಗಳಿಗೆ ಈ ನೆಲದ ಕಾನೂನು ಅನ್ವಯ ಆಗುವುದಿಲ್ಲ.ಉದಾಹರಣೆಗೆ ಸಮ್ಮೇಳನದ ಅಂಗವಾಗಿ ರಾಜಧಾನಿಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಕೇಂದ್ರ ಪಠ್ಯಕ್ರಮದ ಶಾಲೆಗಳು ರಜೆ ಘೋಷಿಸಿಲ್ಲ. ಇದು ನಮ್ಮ ಸ್ಥಿತಿ ಎಂದು ಮಾರ್ಮಿಕವಾಗಿ ವಿವರಿಸಿದರು.

‘ಭಾರತ’ ಎಂಬ ಹುಸಿ ರಾಷ್ಟ್ರೀಯ ಭಾವನೆಯೇ ನಮಗೆ ತೊಡಕಾದಂತೆ ಭಾಸವಾಗುತ್ತಿದೆ. ರಾಷ್ಟ್ರದ ಜೊತೆಗೆ ನೆಲದ ಭಾಷೆಗೆ ಒತ್ತು ಕೊಡುವ ದ್ವಿ ಪೌರತ್ವ ಪದ್ಧತಿ ಬಂದರೆ ಸೂಕ್ತ ಆಗಬಹುದು. ಅದು ನಿಜವಾದ ರಾಷ್ಟ್ರೀಯತೆ, ಒಕ್ಕೂಟ ವ್ಯವಸ್ಥೆಯ ರಾಷ್ಟ್ರೀಯತೆ ಎಂದು ವ್ಯಾಖ್ಯಾನಿಸಿದರು.

ಮಾಹಿತಿ ತಂತ್ರಜ್ಞಾನದ ಪ್ರವಾಹದಲ್ಲಿ ಕನ್ನಡ ನುಡಿಯು ಉಳಿದೀತೇ ಎಂಬ ಆತಂಕ ಅನೇಕರನ್ನು ಕಾಡುತ್ತಿದೆ. ಈ ಆತಂಕ ಸಹಜ. ಆದರೆ ಇದರ ಜೊತೆಗೇ ಆಶಾಕಿರಣವೂ ಕಾಣ್ತಾ ಇದೆ. ಕನ್ನಡದ ಯುವ ಮನಸ್ಸುಗಳೇ ಕನ್ನಡವನ್ನು ಆಧುನಿಕ ಯುಗಕ್ಕೆ ಸಜ್ಜುಗೊಳಿಸುತ್ತಿವೆ. ಜಾಗತೀಕರಣ ಎಂಬುದು ಒಂದು ಮರಳುಗಾಡು. ಈ ಮರಳುಗಾಡು ಸೇರಿಕೊಂಡಿರುವ ಕನ್ನಡ ಮನಸ್ಸುಗಳೇ ಕನ್ನಡಕ್ಕಾಗಿ ಹೊಸಹೊಸ ತಂತ್ರಜ್ಞಾನ ರೂಪಿಸುತ್ತಿವೆ. ಆತ್ಯಾಧುನಿಕ ಜ್ಞಾನಕ್ಕೆ ಕನ್ನಡವನ್ನು ಸಜ್ಜುಗೊಳಿಸುತ್ತಿವೆ ಎಂದರು.

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಕನ್ನಡದ ಉದ್ಧಾರ ಆದ ಹಾಗೆಯೇ? ಎಂದು ಸಂಸದ ಅನಂತಕುಮಾರ್ ಮಾತಿಗೆ ತಿರುಗೇಟು ನೀಡಿದರು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅನಂತಕುಮಾರ್ ತಾವು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದನ್ನು ‘ಹೈಲೈಟ್’ ಮಾಡಿ ಮಾತನಾಡಿದ್ದರು.

ಸಮುದಾಯದ ಉತ್ಪನ್ನ: ಭಾಷೆ ಬಗ್ಗೆ ಮಾತನಾಡಿದ ವಿದ್ವಾಂಸ ಡಾ. ಸಂಗಮೇಶ ಸವದತ್ತಿಮಠ ಅವರು, ಕನ್ನಡ ಮಾತೃಭಾಷೆಯಾಗಿ ಉಳ್ಳವರ, ಮಾತೃಭಾಷೆ ಕನ್ನಡ ಅಲ್ಲದವರ ಹಾಗೂ ಕನ್ನಡದವರ ಜೊತೆಗೆ ಬದುಕುತ್ತಿರುವ ಸಮುದಾಯಗಳ ತಲ್ಲಣಗಳ ಬಗ್ಗೆ ವರ್ಣಿಸಿದರು. ಭಾಷೆಯು ಸಮುದಾಯದ ಉತ್ಪನ್ನವೇ ಹೊರತು ಏಕವ್ಯಕ್ತಿಯ ಆಸ್ತಿ ಅಲ್ಲ ಎಂದರು.

ಕನ್ನಡ ಸಮುದಾಯ ಎದುರಿಸುವ ಆತಂಕಗಳನ್ನು ಮೆಟ್ಟಿ ನಿಂತು ಮುಂದೆ ಬರಬೇಕು. ಕನ್ನಡದ ಮನಸ್ಸುಗಳು ಒಗ್ಗಟ್ಟಿನಿಂದ ಹೋರಾಡಬೇಕು. ಕನ್ನಡಪರ ಸಂಘಟನೆಗಳು ಅವರ ಬೆಂಬಲಕ್ಕೆ ನಿಲ್ಲಬೇಕು. ಸಾಹಿತ್ಯ ಮತ್ತು ಸಮುದಾಯಕ್ಕೆ ಪೂರಕವಾಗಿ ನಿಲ್ಲಲು ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೊಳ್ಳಬೇಕು  ಎಂದು ಒತ್ತಾಸಿದರು.

ಸಂಬಂಧ- ಸಂಭ್ರಮ: ಸಮುದಾಯಗಳು ಮತ್ತು ಕನ್ನಡ ಬಗ್ಗೆ ಮಾತನಾಡಿದ ಸಂಶೋಧಕ ಡಾ. ರಂಗರಾಜ ವನದುರ್ಗ ಅವರು, ಕನ್ನಡದ ಜೊತೆ ಸಮುದಾಯದ ಸಂಬಂಧಗಳ ಬಗ್ಗೆ ಉಲ್ಲೇಖಿಸಿದರು. ಸಂಬಂಧ ಇದ್ದರೆ ಸಂಭ್ರಮ ಇರುತ್ತದೆ,ಸಂಘರ್ಷ ಇದ್ದೆಡೆ ಸಂಕಟ ಇರುತ್ತದೆ. ಕನ್ನಡ ಸಮುದಾಯ ಎದುರಿಸುತ್ತಿರುವ ಆತಂಕಗಳ ದೊಡ್ಡ ಪಟ್ಟಿಯೇ ಇದೆ ಎಂದು ಮಾರ್ಮಿಕವಾಗಿ ವರ್ಣಿಸಿದರು.

ಇಂಗ್ಲಿಷ್ ಕಾನ್ವೆಂಟ್ ಸ್ಕೂಲ್‌ಗಳ ಮುಂದೆ ಡೊನೇಷನ್ ಕೊಡುವವರ ‘ಕ್ಯೂ’ ಇದ್ದರೆ, ಅಂಗನವಾಡಿ ಕಟ್ಟಡಗಳ ಮುಂದೆ ಬಿಸಿಯೂಟಕ್ಕಾಗಿ ಮಕ್ಕಳ ಸಾಲು ಇರುತ್ತದೆ. ಉತ್ತರ ಮತ್ತು ಪೂರ್ವದಿಂದ ಬರುವ ಡಾಬಾ, ಕ್ಯಾಂಪುಗಳು ನಮ್ಮೂರಿನ ತಾಂಡಾಗಳ ತರಹ ಅಲ್ಲ. ಹಳ್ಳಿಯ ಕುಲುಮೆ, ಅಗ್ಗಿಷ್ಟಿಕೆಗಳು ಇಂದು ಆದಾಯದ ಮೂಲಗಳಾಗಿ ಉಳಿದಿಲ್ಲ. ಕಾರಂತರ ಚೋಮನಿಗೆ ಪಶ್ಚಿಮ ಘಟ್ಟದ ಅಂಚಿನಲ್ಲಿ ತುಂಡು ಭೂಮಿ ಕೂಡ ಸಿಕ್ಕಿಲ್ಲ. ಜಾಗತೀಕರಣದ ಪ್ರಭಾವ ನಮ್ಮೂರಿಗೆ ಕಂಪೆನಿಗಳನ್ನು ತಂತು (ತಂದಿತು), ಕನ್ನಡವನ್ನು ತಿಂತು (ತಿಂದಿತು).  ಕಪ್ಪು ಹಣದವರು ಕನ್ನಡವನ್ನು ಸ್ವಾಗತಿಸುವುದಕ್ಕೂ ಕಪ್ಪು ಮುಖದವರು ಕನ್ನಡವನ್ನು ವಿರೋಧಿಸುವುದಕ್ಕೂ ಅರ್ಥಗಳಿವೆ ಎಂದು ಅವರು ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಅನುರಣಿಸಿತು.

ಅರಿವು ಕೊಡಬೇಕಾದ ಅಕ್ಷರ ಸೂರ್ಯ ಆತಂಕ ತರುತ್ತಿದ್ದಾನೆ. ಈ ಆತಂಕಗಳನ್ನು ದೂರ ಮಾಡುವವರು ಯಾರು? ಎಂದು ಮಾಧ್ಯಮಗಳತ್ತ ತಿರುಗಿದ ವನದುರ್ಗ ಅವರು ‘ನಿಮ್ಮ ಉತ್ತರ ಏನು?’ ಎಂದು ಪ್ರಶ್ನಿಸಿದರು. ಮಾಟ, ಮಂತ್ರ, ಬ್ರಹ್ಮಾಂಡ, ಹೀಗೂ ಉಂಟೇ ಎಂದು ಬಿತ್ತರಿಸುವ ಕನ್ನಡದ ಮಾಧ್ಯಮಗಳಾದರೂ ಕನ್ನಡದ ಆತಂಕಗಳನ್ನು ನೀಗಿಸಲಿ ಎಂದು ಕೋರಿದರು.

ತ್ರಿಶಂಕು ಸ್ಥಿತಿ: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ.ಇ. ರಾಧಾಕೃಷ್ಣ ಅವರು, ತುಳು ತಾಯಿಗೆ ಹುಟ್ಟಿ, ಕನ್ನಡದಲ್ಲಿ ಕಲಿತು,ಇಂಗ್ಲಿಷ್ ಪಾಠ ಮಾಡುವ ತಮ್ಮ ಬದುಕಿನ ಅನುಭವಗಳನ್ನೇ ತೆರೆದಿಟ್ಟರು. ಕಾಲದ ಮಾನದಲ್ಲಿ ತಲ್ಲಣಗಳು ಸಹಜ ಕ್ರಿಯೆ.ಹೊರ ಜಗತ್ತನ್ನು ಕೂಡ ನಾವು ನೋಡಬಬೇಕಾಗುತ್ತದೆ ಎಂದರು.

ನೆಲ-ಜಲ ವಿಷಯದ ಬಗ್ಗೆ ಕೆ. ಶಿವಸುಬ್ರಹ್ಮಣ್ಯ ಅವರ ಅನುಪಸ್ಥಿತಿಯಲ್ಲಿ ರಾಧಾಕೃಷ್ಣ ಅವರೇ ಮಾತನಾಡಿದರು. ಕಾಸರಗೋಡಿನ ಕನ್ನಡಿಗರ ಸ್ಥಿತಿಗತಿ, ಕನ್ನಡದ ತ್ರಿಶಂಕು ಸ್ಥಿತಿಯ ಬಗ್ಗೆ ಉಲ್ಲೇಖಿಸಿದರು.

ಕನ್ನಡ ಓದಿದ ಮನಸ್ಸುಗಳಿಗೆ ಉದ್ಯೋಗ ಖಾತ್ರಿ ಎನ್ನುವವರೆಗೂ ಕನ್ನಡ ಬದುಕಲ್ಲ. ನಮ್ಮ ರನ್ನ, ಪಂಪರಿಗೆ ಕನ್ನಡದವರಿಗೆ ಉದ್ಯೋಗ ಕೊಡುವ ಶಕ್ತಿ ಕಮ್ಮಿ ಆಗಿದೆ. ಸಾಂಸ್ಕೃತಿಕ ರಾಜಕಾರಣ ಆಗದ ಹೊರತು ಶಕ್ತಿ ರಾಜಕಾರಣ ಕಟ್ಟಲಾಗದು. ಭಾಷಿಕ ರಾಜಕಾರಣದ ಹೊರತು ಬದುಕಿನ ರಾಜಕಾರಣವನ್ನು ಕಲಿಯುವುದಿಲ್ಲ ಎಂದು ಅವರು ಕನ್ನಡದ ಆತಂಕಗಳನ್ನು ದೂರಮಾಡಬಲ್ಲ ಚೈತನ್ಯವನ್ನೂ ತುಂಬಿದರು.

ತ್ರಿಶಂಕು ಸ್ಥಿತಿ:
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ.ಇ. ರಾಧಾಕೃಷ್ಣ ಅವರು, ತುಳು ತಾಯಿಗೆ ಹುಟ್ಟಿ, ಕನ್ನಡದಲ್ಲಿ ಕಲಿತು, ಇಂಗ್ಲಿಷ್ ಪಾಠ ಮಾಡುವ ತಮ್ಮ ಬದುಕಿನ ಅನುಭವಗಳನ್ನೇ ತೆರೆದಿಟ್ಟರು. ಕಾಲದ ಮಾನದಲ್ಲಿ ತಲ್ಲಣಗಳು ಸಹಜ ಕ್ರಿಯೆ. ಹೊರ ಜಗತ್ತನ್ನು ಕೂಡ ನಾವು ನೋಡಬಬೇಕಾಗುತ್ತದೆ ಎಂದರು.

ನೆಲ-ಜಲ ವಿಷಯದ ಬಗ್ಗೆ ಕೆ. ಶಿವಸುಬ್ರಹ್ಮಣ್ಯ ಅವರ ಅನುಪಸ್ಥಿತಿಯಲ್ಲಿ ರಾಧಾಕೃಷ್ಣ ಅವರೇ ಮಾತನಾಡಿದರು. ಕಾಸರಗೋಡಿನ ಕನ್ನಡಿಗರ ಸ್ಥಿತಿಗತಿ, ಕನ್ನಡದ ತ್ರಿಶಂಕು ಸ್ಥಿತಿಯ ಬಗ್ಗೆ ಉಲ್ಲೇಖಿಸಿದರು.ವೇಗದ ಜಗತ್ತು ಭೋಗದ ಜಗತ್ತು ಆಗಿದೆ. ಶ್ರಮದ ಫಲ ವೇಗವಾಗಿ ಸಿಗಬೇಕು ಎಂದು ಅನುಭವಿಸುವ ಗುಣ ಹೆಚ್ಚಾಗಿದೆ. ಅನುಭಾವಿಸುವ ಗುಣ ಬರಬೇಕು ಎಂದು ಆಶಿಸಿದರು. ಆತಂಕ ಇರುವುದು ಕನ್ನಡ ಭಾಷೆಗೆ ಮಾತ್ರ ಅಲ್ಲ, ಈ ಭೋಗದ ಜಗತ್ತಿನಲ್ಲಿ ಇಂಗ್ಲಿಷ್ ಕೂಡ ಕುಂಠಿತವಾಗುತ್ತಿದೆ. ‘ಸ್ಯಾಂಡ್‌ವಿಚ್’ ಭಾಷೆಗಳು ಹುಟ್ಟುತ್ತಿವೆ. ಭಾಷೆಗೆ ಸಂವೇದನೆಯ ಗುಣ ಬರಬೇಕು, ಉಸಿರು ತುಂಬುವ ಕೆಲಸ ಆಗಬೇಕು. ಸಂಸ್ಕೃತಿಗೆ ಭಾಷೆ ಅತ್ಯಂತ ಮುಖ್ಯ ಮೂಲ ಎಂದು ವಿಶ್ಲೇಷಿಸಿದರು.

ನಮ್ಮ ಪದತಲದ ಕೆಳಗಿನ ಮಣ್ಣು ಕುಸಿಯತೊಡಗಿದಾಗ ಅದನ್ನು ಪಡೆದುಕೊಳ್ಳುವ ತವಕ ಹುಟ್ಟಿಯೇ ಹುಟ್ಟುತ್ತದೆ. ಭಾಷೆ, ಸಂಸ್ಕೃತಿಯೇ ಹೀಗೆ ಎಂದು ಅಮೆರಿಕದಲ್ಲಿ ಕನ್ನಡ ಸಮ್ಮೇಳನಗಳು ಮಿಂಚುತ್ತಿರುವ ಬಗ್ಗೆ ಉಲ್ಲೇಖಿಸಿದರು. ಸಾಹಿತ್ಯದ ಭಾಷೆಗೆ ಆತಂಕ ಇದೆ ನಿಜ. ಆದರೆ ಆಡುವ ಭಾಷೆಗೆ ಅಂತಹ ಆತಂಕ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT