ಬನಹಟ್ಟಿ: ಸ್ಥಳೀಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಹಮ್ಮಿಕೊಂಡ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ಮಧ್ಯಾಹ್ನ 3ಗಂಟೆಯಿಂದ ಐದು ತಾಸು ನಡೆದವು. ಒಟ್ಟು 60ಕ್ಕೂ ಹೆಚ್ಚು ಜೋಡಿಗಳು ಇಲ್ಲಿ ಭಾಗವಹಿಸಿದ್ದವು.
ಕೊಲ್ಲಾಪುರದ ಮೋತಿಭಾಗದ ಚಂದ್ರಹಾರ ಪಾಟೀಲ ಪೈಲ್ವಾನ, ಹರಿಯಾಣದ ಸತ್ಯವೃತ ಪೈಲ್ವಾನ, ಯೋಗೇಶ ಬೊಂಭಾಳೆ ಕೊಲ್ಲಾಪುರ, ಸಂಭಾಜಿ ಸೊಡಕೆ ಪೈಲ್ವಾನ ಸಾಂಗಲಿ, ಸಂಗ್ರಾಮ ಪಾಟೀಲ ಪೈಲ್ವಾನ, ಹಸನ್ ಪಟೇಲ ಕೊಲ್ಲಾಪುರ, ಸೋನು ಪೈಲ್ವಾನ ಹರಿಯಾಣ, ಸುಧೀರ ಪೈಲ್ವಾನ ಸಾಂಗಲಿ, ಕಾಡಪ್ಪ ಪೈಲ್ವಾನ ಬನಹಟ್ಟಿ, ಹೀಗೆ ದೂರದ ಪಂಜಾಬ, ಹರಿಯಾಣ, ದೆಹಲಿ, ನೆರೆಯ ಮಹಾರಾಷ್ಟ್ರದ ಮತ್ತು ಕರ್ನಾಟಕ ಶ್ರೇಷ್ಠ ಕುಸ್ತಿ ಪಟುಗಳು ಇಲ್ಲಿ ತಮ್ಮ ಪ್ರದರ್ಶನ ನೀಡಿದರು.
ನಗರದ ಹಿರಿಯರಾದ ಮಹಾದೇವಪ್ಪ ಹಟ್ಟಿ ಕುಸ್ತಿ ಕ್ರೀಡಾಂಗಣಕ್ಕೆ ಪೂಜೆಯನ್ನು ಸಲ್ಲಿಸಿದರು.
ಈ ಕುಸ್ತಿ ಪಂದ್ಯಾವಳಿಯನ್ನು ನೋಡಲು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಜಿ. ಎಸ್. ನ್ಯಾಮಗೌಡ, ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಸಚಿವ ಮತ್ತು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಗದೀಶ ಗುಡಗುಂಟಿ, ಧರೆಪ್ಪ ಸಾಂಗ್ಲೀಕರ್, ಡಾ. ಬೆಳಗಲಿ, ಜಿ.ಪಂ. ಮಾಜಿ ಅಧ್ಯಕ ಭಾವುಸರ್ಕಾರ ದೇಸಾಯಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಬಾಗಲಕೋಟೆಯ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ದೊಡ್ಡಬಸವರಾಜ ಮತ್ತು ಕ್ರೀಡಾ ವಸತಿಯ ತರಬೇತುಗಾರ್ತಿ ಅನಿತಾ ನಿಂಬರಿಗೆ, ಬೆಳಗಾವಿ ಜಿಲ್ಲಾ ಸಹಾಯಕ ಉಪನಿಬಂಧ ಜಿ.ಎಂ. ಪಾಟೀಲ ದೇವಲದೇಸಾಯಿ ಉಪಸ್ಥಿತರಿದ್ದರು.
ಸ್ಥಳೀಯ ಕುಸ್ತಿ ಕಮಿಟಿ ಅಧ್ಯಕ್ಷ ಚೆನ್ನವೀರ ಹಾದಿಮನಿ, ದೈವ ಮಂಡಳಿ ಅಧ್ಯಕ್ಷ ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ಸಿದ್ರಾಮ ಸವದತ್ತಿ, ಮಲ್ಲಿಕಾರ್ಜುನ ಬಾಣಕಾರ, ಹಟಗಾರ ಬ್ಯಾಂಕಿನ ಅಧ್ಯಕ್ಷ ಶಂಕರ ಜಾಲಿಗಿಡದ ಬ್ರಿಜ್ಮೋಜನ ಡಾಗಾ, ಸ್ಥಳಿಯ ಸಿಪಿಐ ಎಂ.ಬಿ. ಸಂಕದ, ಪಿಎಸ್ಐ ಶಿವಾನಂದ ಕಮತಗಿ, ಶಂಕರ ಸೋರಗಾವಿ ಒಳ್ಳೆಯ ರೀತಿಯ ಸಂಘಟನೆಯನ್ನು ಮಾಡಿದರೆ ಮತ್ತು ದಾವಲಸಾಬ್ ಆಸಂಗಿ, ಕಾಡಪ್ಪ ಜಿಡ್ಡಿಮನಿ, ಬೀರಪ್ಪ ಜಿಡ್ಡಿಮನಿ, ಮಲ್ಲಪ್ಪ ಜಿಡ್ಡಿಮನಿ, ಮಾರುತಿ ಮಹಿಷವಾಡಗಿ, ಧರೆಪ್ಪ ಪಾಟೀಲ, ದೈಹಿಕ ಶಿಕ್ಷಕ ಬಸಗೊಂಡನವರ ನಿರ್ಣಾಯಕರಾಗಿ ಕುಸ್ತಿ ಪಂದ್ಯಗಳನ್ನು ನಡೆಸಿದರು.
ಇಲ್ಲಿ ಕುಸ್ತಿ ಪಂದ್ಯಗಳನ್ನು ವ್ಯವಸ್ಥಿತವಾಗಿ ನಡೆಸುವುದರ ಸಲುವಾಗಿ ಉತ್ತಮ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಬಾಗಲಕೋಟೆಯ ಯುವಜನ ಮತ್ತು ಕ್ರೀಡಾ ಇಲಾಖೆಯು ಐದು ಲಕ್ಷ ರೂಪಾಯಿಗಳನ್ನು ನೀಡಿದೆ.
ಕುಸ್ತಿ ಪಂದ್ಯಾವಳಿಯನ್ನು ನೋಡಲು ಬನಹಟ್ಟಿ, ರಬಕವಿ, ತೇರದಾಳ, ಜಮಖಂಡಿ, ಮುಧೋಳ ಸೇರಿದಂತೆ ಸುತ್ತ ಮುತ್ತಲಿನ ಹತ್ತಾರ ಹಳ್ಳಿಗಳಿಂದ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಐದು ಗಂಟೆಗಳ ಕಾಲ ಕುಸ್ತಿ ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.