ಚಿತ್ರದುರ್ಗ: ಒತ್ತಾಯ ಪೂರ್ವಕವಾಗಿ ಇಲ್ಲಿನ ವೃತ್ತಕ್ಕೆ `ಕನಕ ವೃತ್ತ~ ಎಂದು ನಾಮಕರಣ ಮಾಡಿಲ್ಲ. ಅದು ಜನರ ಭಾವನೆಗಳಿಗೆ ನೀಡಿದ ಗೌರವ ಎಂದು ಶಾಸಕ ಎಸ್.ಕೆ. ಬಸವರಾಜನ್ ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ವತಿಯಿಂದ ಶನಿವಾರ ನಗರದ ಕನಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರು ಕನಕ ವೃತ್ತ ಎಂದು ಹೆಸರಿಸುತ್ತಿರುವ ಹಿನ್ನೆಲೆಯಲ್ಲಿ ಕನಕ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಯಾವುದೇ ವೃತ್ತ, ರಸ್ತೆ, ಬಡಾವಣೆಗಳಿಗೆ ಒತ್ತಾಯ ಪೂರ್ವಕವಾಗಿ ನಾಮಕರಣ ಮಾಡಿದರೆ ಅದು ಶಾಶ್ವತವಾಗಿ ಜನರ ಮನದಲ್ಲಿ ಉಳಿಯುವುದಿಲ್ಲ. ಕನಕದಾಸರ ಪ್ರತಿಮೆ ಕಾರ್ಯಕ್ಕೆ ಶಾಸಕರ ಅನುದಾನದಿಂದ ರೂ 5ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು. ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಕನಕದಾಸರು ಕೇವಲ ಕುರುಬ ಜನಾಂಗಕ್ಕೆ ಸಿಮೀತರಾಗಿಲ್ಲ. ಎಲ್ಲ ಜನರಿಗೂ ಬೇಕಾದವರು. ಹೊಸದುರ್ಗ ತಾಲ್ಲೂಕಿನ ಕೆಲ್ಲೋಡಿನಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಕನಕದಾಸರ ಏಕಶಿಲಾ ವಿಗ್ರಹ ಕಾರ್ಯಕ್ಕೆ ರೂ 10 ಲಕ್ಷ ಅನುದಾನ ನೀಡಲಾಗಿದೆ ಎಂದರು. ಕಾಗಿನೆಲೆ ಮಹಾ ಸಂಸ್ಥಾನದ ಆಡಳಿತಾಧಿಕಾರಿ ಬಿ.ಜಿ. ಗೋವಿಂದಪ್ಪ ಮಾತನಾಡಿ, ನವೆಂಬರ್ 13ರಂದು ಪ್ರತಿಮೆ ಅನಾವರಣ ನಡೆಯಲಿದೆ ಎಂದರು.
ಕಾಗಿನೆಲೆ ಮಹಾ ಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕುರುಬರ ಸಂಘದ ಅಧ್ಯಕ್ಷ ನಿಶಾನಿ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್, ನಿಶಾನಿ ಲಕ್ಷ್ಮಮ್ಮ, ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷಾ ಇತರರು ಹಾಜರಿದ್ದರು. ಶಿಕ್ಷಕಿ ಪುಷ್ಪಾ ಪ್ರಾರ್ಥಿಸಿದರು.
ನಗರಸಭೆ ಸದಸ್ಯ ಎಂ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಉಪನ್ಯಾಸಕ ಎಚ್. ಶ್ರೀನಿವಾಸಮೂರ್ತಿ ನಿರೂಪಿಸಿದರು.