ಚಿಕ್ಕನಾಯಕನಹಳ್ಳಿ: ಪುರಂದರದಾಸರು, ಕನಕದಾಸರು ದಾಸ ಪರಂಪರೆಯನ್ನು ಶ್ರೇಷ್ಠತ್ವಕ್ಕೆ ಕೊಂಡೊಯ್ದಂತೆ ಸಂತ ಪರಂಪರೆಯನ್ನು ಶಿಶುನಾಳ ಷರೀಫರು ಜನ ಸಾಮಾನ್ಯರ ನಡುವೆ ಪ್ರಚಾರಕ್ಕೆ ತಂದರು ಎಂದು ಶಿವಯೋಗಿ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಷರೀಫರು ಜನಪದ ಸಾಹಿತ್ಯ, ತತ್ವಪದಗಳಲ್ಲದೆ ಲಾವಣಿ, ದೊಡ್ಡಾಟ, ಮಹಾಭಾರತ, ರಾಮಾಯಣ, ದೇವಿಪುರಾಣಗಳಂಥ ನಾಟಕಗಳನ್ನು ಬರೆದು ಜನಮನದಲ್ಲಿ ಅಚ್ಚಳಿಯದೆ ನೆಲೆಗೊಂಡರು. ಷರೀಫರು ಹುಟ್ಟಿದ್ದು ಹಜರತ್ ತತ್ವದಲ್ಲಿ, ಬೆಳೆದದ್ದು ಸಂತತ್ವದಲ್ಲಿ ಎಂದರು.
ಸಂತ ಶಿಶುನಾಳ ಷರೀಫ ಹೇಳುವಂತೆ ಜಗದಾಸೆ ಬಿಟ್ಟವನೇ ಸಂತ. ಸನ್ಯಾಸಿ ಶಿವ (ಅಘೋರಿಗಳು), ಸಂಸಾರಿ ಶಿವ ಮತ್ತು ಪರಶಿವವನ್ನು ಷರೀಫರು ತೋರಿಸಿಕೊಟ್ಟರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್ ಮಾತನಾಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ಎಸ್ಎಸ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.