ಬೆಂಗಳೂರು: ಯಾವುದೇ ಸರ್ಕಾರ ಏಕಮುಖವಾಗಿ ಕಾರ್ಯ ನಿರ್ವಹಿಸಬಾರದು. ಅದು ನಿರ್ಣಯಗಳನ್ನು ಕೈಗೊಳ್ಳುವ ಹಂತದಲ್ಲೇ ಜನರ ಭಾಗೀದಾರಿಕೆಗೆ ಅವಕಾಶ ವ್ಯವಸ್ಥೆ ರೂಪಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಯುವಕ, ಯುವತಿಯರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.
ದೇಶದಲ್ಲಿ ಹೊಸ ನಾಯಕತ್ವ ಸೃಷ್ಟಿಗೆ ಒತ್ತು ನೀಡಬೇಕು. ಉದ್ಯೋಗ ಸೃಷ್ಟಿಗೆ ಗಮನಹರಿಸಿದರೆ ಸಾಲದು. ಉದ್ಯಮಗಳನ್ನು ಆರಂಭಿಸಲು ಮುಂದಾಗುವ ಯುವಜನರಿಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಬೇಕು ಎಂಬ ಸಲಹೆಗಳೂ ಯುವಜನರಿಂದ ಬಂದಿವೆ.
ಚುನಾವಣಾ ಪ್ರಣಾಳಿಕೆ ರೂಪಿಸುವ ವಿಚಾರದಲ್ಲಿ ಹೊಸ ಕ್ರಮ ಜಾರಿಗೆ ರಾಹುಲ್ ಮುಂದಾಗಿದ್ದಾರೆ. ವಿವಿಧ ವರ್ಗ, ಸಮುದಾಯ ಮತ್ತು ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಅಭಿಪ್ರಾಯ ಆಲಿಸಿ, ಅವುಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿಯೇ ದೆಹಲಿಯಲ್ಲಿ ಎರಡು ಸಮಾಲೋಚನಾ ಸಭೆಗಳನ್ನು ನಡೆಸಿದ್ದರು. ಮೂರನೇ ಸಮಾಲೋಚನಾ ಸಭೆ ಬೆಂಗಳೂರಿನಲ್ಲಿ ನಡೆಯಿತು.
‘ನಿಮ್ಮ ಧ್ವನಿ–ನಮ್ಮ ಪ್ರತಿಜ್ಞೆ’ ಹೆಸರಿನಡಿ ಅರಮನೆ ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ, ದೇಶದ 21 ರಾಜ್ಯಗಳ 250ಕ್ಕೂ ಹೆಚ್ಚು ಯುವಕ ಯುವತಿಯರು ಭಾಗವಹಿಸಿದ್ದರು. ಆದರೆ ಈ ಸಭೆಗೆ ಮಾಧ್ಯಮಗಳ ಪ್ರವೇಶ ನಿಷೇಧಿಸಲಾಗಿತ್ತು. ಸಭೆಯಲ್ಲಿ ಪ್ರತಿಕ್ರಿಯಿಸಿದ ರಾಹುಲ್, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವೇಳೆಜನರ ಅಭಿಪ್ರಾಯಕ್ಕೆ ಒತ್ತು ನೀಡುವ ಅಗತ್ಯ ಪ್ರತಿಪಾದಿಸಿದರು.
ಯುವಕರಿಗೆ ಆದ್ಯತೆ: ದೇಶದಲ್ಲಿ ಯುವಕರ ಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂಬ ಬೇಡಿಕೆ ಸಂವಾದದಲ್ಲಿ ಕೇಳಿಬಂತು. ನಗರದ ಬಸಂತಿ ವೈದ್ಯಕೀಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಈ ವಿಚಾರದಲ್ಲಿ ಕಾಂಗ್ರೆಸ್ ಮುಕ್ತ ಎಂದರು ಎನ್ನಲಾಗಿದೆ.
‘ರಾಜಕೀಯ ಪ್ರವೇಶ ಮತ್ತು ಅಲ್ಲಿ ಮೇಲಕ್ಕೇರುವುದು ಪಾರದರ್ಶಕವಾಗಿ ನಡೆಯುತ್ತಿಲ್ಲ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಮಾಡುವ ವಿಧಾನದಲ್ಲೇ ಸಮಸ್ಯೆ ಇದೆ. ಯಾವುದಾದರೂ ರಾಜಕೀಯ ಪಕ್ಷ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುತ್ತಿದೆಯೇ?’ ಎಂದು ಅವರು ಸಂವಾದದಲ್ಲಿ ಭಾಗಿಯಾದವರಿಗೆ ಪ್ರಶ್ನೆ ಎಸೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.