ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮುಂದೆ ಕಾರ್ಟೂನ್

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ವಿವಾದಾತ್ಮಕ ಹೇಳಿಕೆಗಳಿಂದ ಇಬ್ಬರು ರಾಜ್ಯದ ಜನರ ಮುಂದೆ ಕಾರ್ಟೂನ್ ವಸ್ತುವಾಗಿದ್ದಾರೆ~ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಲೇವಡಿ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇಬ್ಬರು ನಾಯಕರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ನಾಟಕವಾಡುತ್ತಿದ್ದಾರೆ. ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಹೋಗಲು ಇಬ್ಬರನ್ನು ಬಿಡುವುದಿಲ್ಲ. ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಅವರನ್ನು ಧರ್ಮಸ್ಥಳ ಪ್ರವೇಶ ಮಾಡದಂತೆ ತಡೆಯಲು ತೀರ್ಮಾನಿಸಿವೆ~ ಎಂದು ತಿಳಿಸಿದರು.

`ಇಂತಹ ಭ್ರಷ್ಟರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವೇಶಿಸಿದರೆ ಆ ಕ್ಷೇತ್ರಗಳೇ ಅಪವಿತ್ರವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ಈ ಇಬ್ಬರು ನಾಯಕರಿಗೆ ದೇವಸ್ಥಾನ ಪ್ರವೇಶ ಮಾಡಲು ಅವಕಾಶ ಕೊಡಬಾರದು. ಇಬ್ಬರ ನಾಯಕರ ರಂಪಾಟದಿಂದ ರಾಜಕೀಯದಲ್ಲಿ ಕಲಷಿತ ವಾತಾವರಣ ನಿರ್ಮಾಣವಾಗಿದೆ. ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ ಯಾವುದೇ ಸಮಸ್ಯೆ ಉದ್ಬವಿಸುವುದಿಲ್ಲ~ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯಘಟಕದ ಸಂಚಾಲಕ ಇಂದೂಧರ ಹೊನ್ನಾಪುರ ಮಾತನಾಡಿ `ನೈಸ್ ಅಕ್ರಮದ ವಿರುದ್ಧ ಜನಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಈ ಸಂಬಂಧ ಒಂದು ಹೇಳಿಕೆಯನ್ನು ನೀಡಿಲ್ಲ. ಅವರು ಮೌನ ವಹಿಸಿರುವುದನ್ನು ಗಮನಿಸಿದರೆ ನೈಸ್ ವ್ಯವಹಾರದಲ್ಲಿ ಅವರು ಮಾಡಿರುವ ಭ್ರಷ್ಟಾಚಾರ ಒಪ್ಪಿಕೊಂಡಂತಿದೆ~ ಎಂದು ಹೇಳಿದರು.

`ನ್ಯಾಯಕ್ಕಾಗಿ ನಾವು ಹಾಗೂ ಹಲವಾರ ಸಂಘಟನೆಗಳು ಇದೇ 27 ರಂದು ನೈಸ್ ಸಂಸ್ಥೆಯ ಅಕ್ರಮಗಳ ವಿರುದ್ಧ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶಕ್ಕೆ ಪರಿಸರ ಹೋರಾಟಗಾರ್ತಿ ಮೇದಾ ಪಾಟ್ಕರ್ ಆಗಮಿಸಲಿದ್ದಾರೆ. ಅಂದು ಸರ್ಕಾರದ ಕೆಲವು ಶಾಸಕರು, ಸಚಿವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದೆ. ಈ ಸಮಾರಂಭದಿಂದ ತಪ್ಪಿಸಿಕೊಳ್ಳಲು ಈ ಕುತಂತ್ರ ಮಾಡುತ್ತಿದ್ದಾರೆ~ ಎಂದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟಸ್ವಾಮಿ, ಪತ್ರಕರ್ತ ಅಗ್ನಿ ಶ್ರೀಧರ್  ಇತರರು ಉಪಸ್ಥಿತರಿದ್ದರು.

ಪ್ರಮಾಣಕ್ಕೂ-ಸರ್ಕಾರಕ್ಕೂ ಸಂಬಂಧವಿಲ್ಲ: ಗೃಹ ಸಚಿವ
ಮಂಡ್ಯ:
ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಧರ್ಮಸ್ಥಳದ ಮಂಜುನಾಥ ದೇವರ ಎದುರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಣೆ-ಪ್ರಮಾಣ ಮಾಡುವುದು ಅವರ ವೈಯಕ್ತಿಕ ವಿಷಯ. ಸರ್ಕಾರಕ್ಕೂ ಅದಕ್ಕೂ ಸಂಬಂಧವಿಲ್ಲ. ಇದು, ಗೃಹ ಸಚಿವ ಆರ್. ಅಶೋಕ್ ಅವರ ಪ್ರತಿಕ್ರಿಯೆ.

ಭ್ರಷ್ಟಾಚಾರ ಪ್ರಕರಣಗಳ ಪದೇ ಪದೇ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂಥ ಬೆಳವಣಿಗೆಗಳಿಗೆ ಅಂತಿಮವಾಗಿ ತೆರೆ ಎಳೆಯುವ ಉದ್ದೇಶದೊಂದಿಗೆ ಮುಖ್ಯಮಂತ್ರಿಗಳು ಈ ಕ್ರಮಕ್ಕೆ ಮುಂದಾಗಿರಬಹುದು ಎಂದು ಮಂಗಳವಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT