ಗಜೇಂದ್ರಗಡ: `ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಬೇಕು' ಎಂದು ತಾಲ್ಲೂಕು ಕೃಷಿ ಅಧಿಕಾರಿ ವಿ.ವಿ.ಮ್ಯಾಗೇರಿ ಹೇಳಿದರು.
ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನರ ಹಾಗೂ ಅಧಿಕಾರಿಗಳ, ಜನಪ್ರತಿನಿಧಿಗಳ ನಡುವೆ ಸಮನ್ವಯದ ಕೊರತೆ ಇದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜನತೆಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡಕಬಹುದು ಎಂದರು.
`ಗ್ರಾಮ ಸಭೆ'ಗಳು ಜನತೆಯ ಸಮಸ್ಯೆ ನಿವಾರಣೆಯ ಸಭೆಗಳಿದ್ದಂತೆ. ಈ ಸಭೆಯಲ್ಲಿ ಸರ್ಕಾರದ ಇಪ್ಪತ್ತೇಳು ಇಲಾಖೆಗಳ ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿರುತ್ತಾರೆ. ಹೀಗಾಗಿ ಗ್ರಾಮಸ್ಥರು ಇಂತಹ ಸಭೆಗಳಲ್ಲಿ ಅನಾವಶ್ಯಕ ಗೊಂದಲಗಳಿಗೆ ಅವಕಾಶ ಕಲ್ಪಿಸದೆ, ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಾಡಲಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಕಮಲಾಕ್ಷಮ್ಮ ಸೊಬಗಿನ, ಬಸವರಾಜ ಮಾದರ, ಮಹಾಂತಯ್ಯ ಜುಕ್ತಿಹಿರೇಮಠ, ಅನ್ನದಾನಿ ಬೆಲ್ಲದ, ಸೀಮಣ್ಣ ಕುಬಸದ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಪಾಟೀಲ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಲ್ಪನಾ ಕಡಗದ, ಆಹಾರ ನಿರೀಕ್ಷಕ ಮಠಪತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸ್.ಬಿ.ಹಿರೇಹೊಳಿ ವೈದ್ಯಾಧಿಕಾರಿ ಡಾ.ಬಸವರಾಜ ಪಾಟೀಲ ಉಪಸ್ಥಿತರಿದ್ದರು.