ಧಾರವಾಡ: ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಕುಲದೀಪ ಚತುರ್ವೇದಿ ಅವರು ಶುಕ್ರವಾರ ಭೇಟಿ ನೀಡಿ ಟಚ್ಸ್ಕ್ರೀನ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಕೆಲಸಗಳನ್ನು ವಿಕ್ಷೀಸಿದ ಅವರಿಗೆ ವಿವಿಧ ಸಂಘ- ಸಂಸ್ಥೆಗಳು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದವು.ಜನಶತಾಬ್ದಿ ಎಕ್ಸಪ್ರೆಸ್ ರೈಲನ್ನು ಧಾರವಾಡದವರೆಗೆ ವಿಸ್ತರಿಸಬೇಕು. ಧಾರವಾಡ- ಬೆಂಗಳೂರು ಇಂಟರ್ಸಿಟಿ ರೈಲಿನ ವೇಳೆಯನ್ನು ಬೆಳಿಗ್ಗೆ 5.45ಕ್ಕೆ ನಿಗದಿಪಡಿಸಬೇಕು.
ಧಾರವಾಡದಿಂದ ತಿರುಪತಿಗೆ ಹೊಸ ರೈಲಿನ ಸೇವೆ ಒದಗಿಸಬೇಕು. ರೈಲ್ವೆ ನಿಲ್ದಾಣದ ಸಮೀಪದಿಂದ ಹೋಗುವ ಕಲ್ಯಾಣನಗರ ರಸ್ತೆಯಲ್ಲಿ ಮೇಲುಸೇತುವೆ ನಿರ್ಮಿಸಬೇಕು.ಯಶವಂತಪುರ ರೈಲ್ವೆ ನಿಲ್ದಾಣದ ಮಾದರಿಯಲ್ಲಿಯೇ ಈ ನಿಲ್ದಾಣವನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲಿಂದ ಬೆಂಗಳೂರಿಗೆ ರಾತ್ರಿ 11ಕ್ಕೆ ಹೊಸ ರೈಲಿನ ಸೇವೆ ಒದಗಿಸಬೇಕು. ಮುಂಗಡ ಟಿಕೆಟ್ ಕೌಂಟರ್ಗಳನ್ನು ಹೆಚ್ಚಿಸಬೇಕು. ಸಂಪರ್ಕ ಕ್ರಾಂತಿ ಹಾಗೂ ಹೌರಾ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹುಬ್ಬಳ್ಳಿ- ಮುಂಬೈ ನಡುವೆ ರಾತ್ರಿ 8ಕ್ಕೆ ರೈಲಿನ ಸೇವೆ ಒದಗಿಸಬೇಖು. ಧಾರವಾಡ- ಸೊಲ್ಲಾಪುರ ರೈಲನ್ನು ಶಿರಡಿವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ- ತುಮಕೂರ ಮಧ್ಯೆ ದ್ವಿಪಥ ರೈಲ್ವೆ ಟ್ರ್ಯಾಕ್ ಮಾಡಬೇಕು. ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸಪ್ರೆಸ್ ರೈಲನ್ನು ಧಾರವಾಡದ ವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ- ಮಂಗಳೂರು ರೈಲು ಸೇವೆ ಒದಗಿಸಬೇಕು. ಹುಬ್ಬಳ್ಳಿ- ಪುಣೆ ನಡುವೆ ಇಂಟರ್ಸಿಟಿ ರೈಲಿನ ವ್ಯವಸ್ಥೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು, ಧಾರವಾಡ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರು, ಧಾರವಾಡ ತಾಲ್ಲೂಕು ಬ್ರಾಹ್ಮಣ ಸಭಾ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಮನವಿ ಸಲ್ಲಿಸಿದರು. ದತ್ತಾ ಡೋರ್ಲೆ, ಸುರೇಶ ಬೇದರೆ, ಶಿವು ಹಿರೇಮಠ, ಸಂಜಯ ಕಪಟಕರ, ಪ್ರಕಾಶ ಗೋಡಬೋಲೆ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ, ಹೇಮರಾಜ ಭಂಡಾರಿ, ಸುನೀಲ ಮೋರೆ, ಅರವಿಂದ ಆಲದಕಟ್ಟಿ, ಸೀತಾರಾಮ ಶೆಟ್ಟಿ, ಪ್ರಭು ನಡಕಟ್ಟಿ, ರವೀಂದ್ರ ಆಕಳವಾಡಿ, ಪ್ರೊ. ಪಿ.ಜಿ.ನರಸಾಪುರ, ಶಂಕರ ಕುಲಕರ್ಣಿ, ಆರ್.ಡಿ.ಕುಲಕರ್ಣಿ, ಅಚ್ಯುತ್ ನಡಿಗೇರ, ಡಾ.ವಿ.ಎಸ್.ಕಡಕೋಳ, ಪ್ರೊ.ಗೋಪಾಲ ಕಮಲಾಪುರ, ರಂಗಣ್ಣ ಕುಲಕರ್ಣಿ ಇದ್ದರು.
ಅಳ್ನಾವರ ರೈಲು ನಿಲ್ದಾಣಕ್ಕೆ ಚತುರ್ವೇದಿ ಭೇಟಿ
ಅಳ್ನಾವರ: ಇಲ್ಲಿನ ರೈಲು ನಿಲ್ದಾಣಕ್ಕೆ ನೈಋತ್ಯ ರೈಲ್ವೆ ಜಿಎಂಡಿ ಕುಲದೀಪ ಚತುರ್ವೇದಿ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ, ಪರಿಶೀಲಿಸಿದರು.ರೈಲು ನಿಲ್ದಾಣದ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಅವರು, ರೈಲ್ವೆ ಇಲಾಖೆಯ ವಸತಿ ಗೃಹ ಹಾಗೂ ಆಸ್ಪತ್ರೆಗಳ ಪರಿಶೀಲನೆ ನಡೆಸಿದರು.
ರೈಲು ನಿಲ್ದಾಣಕ್ಕೆ ಅವಶ್ಯವಿರುವ ಹೈಮಾಸ್ಟ್ ವಿದ್ಯುತ್ ದೀಪಗಳ ಅಳವಡಿಕೆ, ಸ್ಕೂಟರ್ ಪಾರ್ಕಿಂಗ್ ವ್ಯವಸ್ಥೆ, ಪಟ್ಟಣದ ಚರಂಡಿ ನೀರು ಇಲಾಖೆಯ ಜಾಗದಿಂದ ಸರಾಗವಾಗಿ ಹರಿದು ಹೋಗಲು ತಕ್ಷಣವೇ ಕ್ರಮ ಜರುಗಿಸುವಂತೆ ಹಾಗೂ ಇನ್ನಿತರ ಮೂಲಸೌಲಭ್ಯ ಕಲ್ಪಿಸಲು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಚತುರ್ವೇದಿ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.