ಬೆಂಗಳೂರು: ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ (ಎಫ್ಪಿಎ), ಕರ್ನಾಟಕ ಕ್ಯಾನ್ಸರ್ ಸೊಸೈಟಿ ಮತ್ತು ಚಿತ್ತಾರಿ ಫೌಂಡೇಷನ್ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ `ವಿಶ್ವ ಜನಸಂಖ್ಯಾ ದಿನಾಚರಣೆ-13' ಕಾರ್ಯಕ್ರಮದ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಗೆ ಏರ್ಪಡಿಸಿದ್ದ `ಜನಸಂಖ್ಯೆ ಹೆಚ್ಚಳ' ವಿಷಯದ ಕುರಿತಾದ ಚಿತ್ರ ರಚನೆ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಚಿಸಿದ್ದ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಸ್ಪರ್ಧೆಯಲ್ಲಿ ಆಯ್ಕೆಯಾದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಚಿತ್ರಗಳು `ಹೆಚ್ಚುತ್ತಿರುವ ಜನಸಂಖ್ಯೆ ಪ್ರಪಂಚದ ವಿನಾಶಕ್ಕೆ ಕಾರಣವಾಗಲಿದೆ', `ಭಾರತದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ತೆರಳಲು ಜಾಗವಿಲ್ಲದಂತಾಗಿದೆ', `ಉಷ್ಣತೆಯಲ್ಲಿ ಹೆಚ್ಚಳ, ಬಾಲ ಕಾರ್ಮಿಕ ಪದ್ಧತಿ, ಒಣ ಭೂಮಿ, ನಿರುದ್ಯೋಗ, ನೀರಿನ ಕೊರತೆ, ಅಪೌಷ್ಟಿಕತೆ', `ಜನನ ಪ್ರಮಾಣದಲ್ಲಿ ಏರಿಕೆ ಮರಣ ಪ್ರಮಾಣದಲ್ಲಿ ಇಳಿಕೆ'... ಹತ್ತು ಹಲವು ಶೀರ್ಷಿಕೆಗಳಡಿ ಜನರ ಜಾಗೃತಿಗೆ ಪ್ರೇರಣೆ ನೀಡುವಂತಿದ್ದವು.
ಕಾರ್ಯಕ್ರಮ ಉದ್ಘಾಟಿಸಿದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿ ಸಂಗಮೇಶ ಉಪಾಸೆ, `ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದರು.
ಶಾಸಕ ಸಿ.ಎನ್.ಅಶ್ವಥನಾರಾಯಣ ಮಾತನಾಡಿದರು. ಎಫ್.ಪಿ.ಎ. ಇಂಡಿಯಾ ಅಧ್ಯಕ್ಷೆ ಮಧುರಾ ಅಶೋಕ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಅಗತ್ಯ ತ್ರಿಚಕ್ರ ಬೈಸಿಕಲ್ಗಳನ್ನು ನೀಡಲಾಯಿತು.