ಗದಗ: ಜನಸಂಖ್ಯೆ ಹೆಚ್ಚಳದಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ದೇಶಗಳು ಹಿಂದುಳಿಯುತ್ತಿದ್ದು, ಜನಸಂಖ್ಯೆ ಮೇಲೆ ನಿಯಂತ್ರಣ ಸಾಧಿಸಿದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ತಿಳಿಸಿದರು.
ನಗರದ ಲೋಯೊಲಾ ಪಿ.ಯು ಕಾಲೇಜಿನಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಮತ್ತು ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡತನ, ಅನಕ್ಷರತೆ, ಮೂಢನಂಬಿಕೆ ಮುಂತಾದವುಗಳು ಜನಸಂಖ್ಯಾ ಹೆಚ್ಚಳಕ್ಕೆ ಕಾರಣ ವಾಗಿದ್ದು, ಆಧುನೀಕತೆ ಭರಾಟೆ ಯಲ್ಲಿರುವ ಜನರು ಇದೆಲ್ಲದರ ಬಗ್ಗೆ ಅರಿತು ಕೊಂಡು ಜನಸಂಖ್ಯೆ ನಿಯಂತ್ರಣದ ಕಡೆಗೆ ಗಮನ ಹರಿಸಬೇಕು ಎಂದರು.
ಲೊಯೊಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ನೀನಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಂತವ್ವ ದಂಡಿನ ಮಾತನಾಡಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಶಕುಂತಲಾ ಸಿಂಧೂರ, ಕಾರ್ಯದರ್ಶಿ ಅನ್ನಪೂರ್ಣ ವರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ, ಕೆ.ಎಲ್.ಇ. ಜೆ.ಟಿ. ಮಹಾವಿದ್ಯಾಲಯದ ಉಪನ್ಯಾಸಕ ಎಸ್.ವಿ. ಕುಂದಗೋಳ ಹಾಜರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎನ್. ಮಸರಕಲ್ಲ ನಿರೂಪಿಸಿದರು. ಲಾಳಗಟ್ಟಿ ವಂದಿಸಿದರು.
ನಗರದ ಮುನ್ಸಿಪಲ್ ಕಾಲೇಜಿನಿಂದ ಪ್ರಮುಖ ಬೀದಿಗಳಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಶಾಲಾ -ಕಾಲೇಜು ವಿದ್ಯಾರ್ಥಿಗಳ ಜಾಥಾಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರೇಗೌಡ ಚಾಲನೆ ನೀಡಿದರು.