ಪಡುಬಿದ್ರಿ: ಕರಾವಳಿ ತೀರದ ಜನರಿಗಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಬಯೋಮೆಟ್ರಿಕ್ ಫೋಟೋ ತೆಗೆಯುವ ಕಾರ್ಯದ ದಾಖಲಾತಿ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯ ಕರಾವಳಿ ತೀರದ 63 ಗ್ರಾಮಗಳಲ್ಲಿ ಈ ಕಾರ್ಯ ನಡೆಯಲಿದೆ.
2009ರ ಗಣತಿಯಾಧಾರದಲ್ಲಿ 2010ರಲ್ಲಿ ಸಾರ್ವಜನಿಕರ ಭಾವಚಿತ್ರ ಸಹಿತ ಸಮಗ್ರ ಮಾಹಿತಿ ಸಂಗ್ರಹಿಸಿ ನೋಂದಾವಣೆ ಕಾರ್ಯ ನಡೆಸಲಾಗಿತ್ತು. ಆದರೆ ಈ ಸಂದರ್ಭ ಶೇ.65ರಷ್ಟು ದಾಖಲಾತಿಯು ತಪ್ಪುಗಳಿಂದ ಕೂಡಿದ್ದರಿಂದ ಮರು ದಾಖಲಾತಿಗೆ ನಿರ್ಧರಿಸಿ ಇದೀಗ ಈ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ.
ಹೆಜಮಾಡಿಯಲ್ಲಿ ಒಂದು ವಾರಗಳ ಹಿಂದೆ ಆರಂಭಗೊಂಡಿದ್ದು, ಮಂಗಳವಾರ ಈ ಕಾರ್ಯ ಮುಗಿದಿದೆ. ಬುಧವಾರದಿಂದ ಪಡುಬಿದ್ರಿಯಲ್ಲಿ 13 ರಿಂದ 20 ರವರೆಗೆ ನಡೆಯಲಿದೆ.
ಈ ಪ್ರಕ್ರಿಯೆಯಲ್ಲಿ ಕೇಂದ್ರದಲ್ಲಿರುವ ಕಂಪ್ಯೂಟರ್ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಅಲ್ಲದೆ ಈ ವೇಳೆ ಬೆರಳುಗಳ ಅಚ್ಚನ್ನು ಹಾಗೂ ಕಣ್ಣುಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತಾರೆ.
ಎಲ್ಲೆಲ್ಲಿ: ಇದು ಕರಾವಳಿ ಪ್ರದೇಶದ ಗ್ರಾಮಗಳಿಗೆ ಮಾತ್ರ ಸೀಮಿತವಾಗಿದ್ದು, ಉಡುಪಿಯ 31 ಹಾಗೂ ಕುಂದಾಪುರ ತಾಲ್ಲೂಕಿನ 32 ಒಟ್ಟು 63 ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕರಾವಳಿ ತೀರದ ಜನತೆಗಾಗಿ ಈ ಯೋಜನೆಯನ್ನು ಸರ್ಕಾರ ದೇಶದಾದ್ಯಂತ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದೆ.
ಖಾಸಗಿ ಕಂಪೆನಿಯೊಂದು ಇದರ ದಾಖಲಾತಿ ನಡೆಸುತಿದ್ದು, ಆರು ತಿಂಗಳ ಬಳಿಕ ಸ್ಮಾರ್ಡ್ ಕಾರ್ಡ್ ದೊರೆಯಲಿದೆ. ಈ ಕಾರ್ಡ್ನಲ್ಲಿ ಆತನ ಎ್ಲ್ಲಲ ವಿವರಗಳು ಇರುತ್ತದೆ.
ಗೊಂದಲ, ಅಸಮಾಧಾನ: ಈ ವೇಳೆ ಹೆಜಮಾಡಿಯಲ್ಲಿ ಈ ಕಾರ್ಯ ಕಳೆದ ವಾರದಿಂದ ನಡೆಯುತ್ತಿದೆ. ಆದರೆ ಸರಿಯಾದ ಮಾಹಿತಿ ದೊರಕದ ಕಾರಣ ಆರಂಭದಲ್ಲಿ ಜನ ಫೋಟೊ ತೆಗೆಸುವ ಕಾರ್ಯದಿಂದ ದೂರ ಉಳಿದಿದ್ದರು. ಕೊನೆ ಗಳಿಗೆಯಲ್ಲಿ ಅಕ್ಕಪಕ್ಕದವರಿಂದ ಮಾಹಿತಿ ಪಡೆದುಕೊಂಡು ಕೇಂದ್ರಕ್ಕೆ ತೆರಳಿ ಫೋಟೋ ತೆಗೆಸಲು ಮುಂದಾದರು. ಏಕಕಾಲದಲ್ಲಿ ಗ್ರಾಮಸ್ಥರು ಬಂದಿದ್ದರಿಂದ ಗಂಟೆಗಟ್ಟಲೆ ಜನ ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕೆಲವರಿಗೆ ಈ ಫೋಟೋವನ್ನು ಏಕೆ ತೆಗೆಸಿಕೊಳ್ಳುತ್ತಾರೆ. ಇದರಿಂದ ಏನು ಪ್ರಯೋಜನ ಎಂದು ಪರದಾಡುವಂತಾಗಿತ್ತು.
`ವಿವಿಧ ನೋಂದಾವಣೆ ಹೆಸರಿನಲ್ಲಿ ಪದೇ ಪದೇ ಭಾವಚಿತ್ರ ತೆಗೆಯುವ ಕಾರ್ಯಗಳು ನಡೆಯುತ್ತಿದೆ. 3-4 ಬಾರಿ ವಿವಿಧ ದಾಖಲೆಯೊಂದಿಗೆ ಬಂದಿದ್ದೇನೆ. ಆದರೆ ಈವರೆಗೂ ಯಾವುದೇ ಕಾರ್ಡು ನನಗೆ ದೊರಕಿಲ್ಲ. ಈ ಬಾರಿ ದಾಖಲಾತಿ ಬಳಿಕ ಆಧಾರ್ ಬರಹದ ಕಾರ್ಡ್ ನೀಡಲಾಗಿತ್ತಾದರೂ, ಈ ಬಗ್ಗೆ ಸಮಗ್ರ ಮಾಹಿತಿ ದೊರಕಿಲ್ಲ. ಇಲಾಖೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು~ ಹೆಜಮಾಡಿಯ ಪ್ರಾಣೇಶ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.