ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯಾ ಶಿಕ್ಷಣ ಸಂಘ

Last Updated 22 ಅಕ್ಟೋಬರ್ 2011, 11:05 IST
ಅಕ್ಷರ ಗಾತ್ರ

ಹಾವೇರಿ: `2011ನೇ ಜನಗಣತಿ ಪ್ರಕಾಶ ದೇಶದ ಜನಸಂಖ್ಯೆ 121 ಕೋಟಿಗೆ ತಲುಪಿದೆ. ಇದೇ ರೀತಿ ನಿಯಂತ್ರಣವಿಲ್ಲದೇ ದೇಶದ ಜನಸಂಖ್ಯೆ ಹೆಚ್ಚಾಗುತ್ತಾ ಹೋದರೆ, ಜನರಿಗೆ ತಿನ್ನಲು ಆಹಾರ, ಕುಡಿಯಲು ನೀರು, ವಾಸಿಸಲು ಭೂಮಿ, ಓಡಾಡಲು ಸಮರ್ಪಕ ಸಾರಿಗೆ ವ್ಯವಸ್ಥೆ ಸಿಗುವುದಿಲ್ಲ.~

`ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆಯಲ್ಲದೇ, ಸಾಮಾಜಿಕ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರಿಗೂ ಸರಿಯಾದ ಹಾಗೂ ಸಮಪರ್ಕವಾದ ಶಿಕ್ಷಣ, ಆರೋಗ್ಯ ಹಾಗೂ ರಕ್ಷಣೆ ದೊರೆಯುವುದಿಲ್ಲ~.

`ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ದೇಶದ ಜನಸಂಖ್ಯೆ ನಿಯಂತ್ರಣ. ಅದು ಸಾಧ್ಯವಾಗದಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಈ ಎಲ್ಲ ಸಮಸ್ಯೆಗಳು ಇಮ್ಮಡಿಗೊಳ್ಳಲಿವೆ. ಮುಂದೊಂದು ದಿನ ದೇಶದಲ್ಲಿ ಆಹಾರ, ನೀರಿಗಾಗಿಯೇ ಅರಾಜಕತೆ ಉಂಟಾದರೂ ಆಶ್ಚರ್ಯಪಡಬೇಕಿಲ್ಲ.~

ಹೀಗೆ ಇಡೀ ಒಂದು ದಿನ ನಗರದ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ `ಜನಸಂಖ್ಯಾ ಶಿಕ್ಷಣ ಸಂಘ~ದ ವಿದ್ಯಾರ್ಥಿಗಳು ದೇಶದ ಜನಸಂಖ್ಯೆ ಹೆಚ್ಚಳದಿಂದ ಆಗುವ ತೊಂದರೆಗಳು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಗ್ಗಾವಿ ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದ ಜನರಿಗೆ ಮನವರಿಕೆ ಮಾಡಿಕೊಟ್ಟರು.

`ಜನಸಂಖ್ಯಾ ಶಿಕ್ಷಣ ಸಂಘ~ವನ್ನು ಅಸ್ತಿತ್ವಕ್ಕೆ ತಂದ ಮರುದಿನವೇ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕ್ಕಬೆಂಡಿಗೇರಿ ಗ್ರಾಮಕ್ಕೆ ಕ್ಷೇತ್ರ ಕಾರ್ಯವನ್ನು ಹಮ್ಮಿಕೊಂಡು ಅಲ್ಲಿನ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು.

ನಂತರ ಪ್ರತಿ ಮನೆಗೆ ತೆರಳಿ ಆ ಕುಟುಂಬದಲ್ಲಿ ವಾಸವಾಗಿರುವ ಜನರ ಗಣತಿ ಮಾಡಿದರಲ್ಲದೇ, ತಜ್ಞರಿಂದ ಸಲಹೆ ಕೊಡಿಸಿದರು. ಗ್ರಾಮಸ್ಥರಿಗೆ ಜನಸಂಖ್ಯಾ ಸ್ಪೋಟದಿಂದ ಆಗುವ ದುಷ್ಪರಿಣಾಮಗಳ ಕುರಿತು ಅಂಕಿ, ಸಂಖ್ಯೆ ಸಮೇತ ವಿವರಣೆ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿದರು.

ಮನಸೋತ ಗ್ರಾಮಸ್ಥರು: ವಿದ್ಯಾರ್ಥಿ, ವಿದ್ಯಾರ್ಥಿನಿಯರು ಲವಲವಿಕೆಯಿಂದ ಓಡಾಡಿಕೊಂಡು ಜನಸಂಖ್ಯೆ ಕುರಿತ ಜಾಗೃತಿ ಮೂಡಿಸಿದ ರೀತಿಗೆ ಗ್ರಾಮಸ್ಥರು ಮನಸೋತು, ಶಾಲಾ ಆವರಣದಲ್ಲಿ ಸಮಾರಂಭವನ್ನು ಆಯೋಜಿಸಿದರಲ್ಲದೇ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದರು.
 
ಗ್ರಾಮೀಣ ಜನರಲ್ಲಿ ತಿಳಿದುಕೊಳ್ಳುವ ಮನೋಭಾವವಿದೆ. ಆದರೆ, ತಿಳಿಸಿಕೊಡುವವರ ಸಂಖ್ಯೆ ಕಡಿಮೆಯಿದೆ. ದೇಶದ ಗಂಭೀರ ಸಮಸ್ಯೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ತಿಳಿವಳಿಕೆ ಇಲ್ಲದಿರುವುದೇ ಜನಸಂಖ್ಯೆ ಸ್ಪೋಟದಂತಹ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎಂದು ಪ್ರಾಚಾರ್ಯ ಎಸ್.ಕೆ.ಪ್ರಸಾದಿಮಠ ಹೇಳಿದರು.

ಜನಸಂಖ್ಯೆ ಶಿಕ್ಷಣ ಸಂಘ: ಜನಸಂಖ್ಯೆ ಸ್ಪೋಟ ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದ್ದು, ಈ ಸಮಸ್ಯೆ ನಿವಾರಣೆಗೆ ಗಂಭೀರ ಚಿಂತನೆ ನಡೆಸುವ ಹಾಗೂ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳೇ ಜನಸಂಖ್ಯೆ ಶಿಕ್ಷಣ ಸಂಘವನ್ನು ಹುಟ್ಟು ಹಾಕಿದ್ದಾರೆ.

ಗ್ರಾಮೀಣ ಭಾಗದಲ್ಲಿ ಜನಸಂಖ್ಯೆ ನಿಯಂತ್ರಣ ಹಾಗೂ ಜನಜಾಗೃತಿ ಕಾರ್ಯಕ್ರಮ ಆಯೋಜಿಸುವುದು, ಸಾಕ್ಷರತೆಯ ಮಟ್ಟ ಹೆಚ್ಚಿಸುವುದು, ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸುವುದು, ಮಾನವ ಸಂಪನ್ಮೂಲದ ದಕ್ಷತೆಯನ್ನು ಅಭಿವೃದ್ಧಿಪಡಿಸುವುದು, ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಜಾಥಾ, ಬೀದಿ ನಾಟಕ, ತಜ್ಞರಿಂದ ಸಲಹೆ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವುದು ಈ ಸಂಘದ ಪ್ರಮುಖ ಧ್ಯೇಯಗಳಾಗಿವೆ ಎನ್ನುತ್ತಾರೆ ವಿದ್ಯಾರ್ಥಿ ಕಾರ್ಯದರ್ಶಿ ಎಚ್.ಐ.ಹಬಸಿ.

ವಿದ್ಯಾರ್ಥಿಗಳೇ ಜನಸಂಖ್ಯೆ ಶಿಕ್ಷಣ ಸಂಘವನ್ನು ಹುಟ್ಟು ಹಾಕಿರುವುದು ನಿಜಕ್ಕೂ ಶ್ಲಾಘನೀಯ. ಸಂಘವನ್ನು ಹುಟ್ಟು ಹಾಕಿದರೆ ಸಾಲದು, ಅದು ನಿರಂತರವಾಗಿ ಕ್ರೀಯಾಶೀಲವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮುಖ್ಯ ಎಂದು ಸಂಘವನ್ನು ಉದ್ಘಾಟಿಸಿದ ಜಿಲ್ಲಾ ಡಯಟ್ ಪ್ರಾಚಾರ್ಯ ಎಂ.ಡಿ.ಬಳ್ಳಾರಿ ಹೇಳಿದರು.

ಸಂಘದ ಉದ್ಘಾಟನೆ ಸಂದರ್ಭದಲ್ಲಿ ಜನಸಂಖ್ಯೆ ಸ್ಪೋಟದಿಂದ ಆಗುವ ದುಷ್ಪರಿಣಾಮಗಳ ಬಗೆಗಿನ ವಸ್ತು ಪ್ರದರ್ಶನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT